Thursday 24 July 2014

DAANADA UDDESHA-the purpose of giving

 ದಾನದ ಉದ್ದೇಶ
ದಾನಕ್ಕೆ ಹಲವಾರು ಉದ್ದೇಶಗಳಿವೆ :


  • ಪರರಲ್ಲಿ ಬಾಂಧವ್ಯ ಗಳಿಸಲು ಮತ್ತು ವೃದ್ಧಿಸಲು ದಾನಭ್ಯಾಸ.
  • ಸುಖ್ಯಾತಿ ಹೊಂದಲು ಮತ್ತು ವೃದ್ಧಿಸಲು ದಾನಭ್ಯಾಸ.
  • ಸಂಕಷ್ಟಗಳಿಂದ ದೂರಾಗಲು ದಾನಭ್ಯಾಸ.
  • ಧಮ್ಮಪಥದಲ್ಲಿ ಮುಂದುವರೆಯಲು ದಾನಭ್ಯಾಸ.
  •       ಉತ್ತಮ ಮಾನವನಾಗಲು ದಾನಭ್ಯಾಸ.
  • ಮುಂದಿನ ಜನ್ಮದಲ್ಲಿ ಸುಂದರವಾಗಿ, ಸುಖಿಯಾಗಿ ಯಶಸ್ವಿಯಾಗಲು ದಾನಭ್ಯಾಸ.
  • ಮುಂದಿನ ಜನ್ಮದಲ್ಲಿ ಶ್ರೀಮಂತರಾಗಿ ಹುಟ್ಟಲು ದಾನಭ್ಯಾಸ.
  • ಶ್ರೇಷ್ಠವಾದ ಆನಂದ ಪಡೆಯಲು ದಾನಭ್ಯಾಸ.
  • ಪರೋಕ್ಷವಾಗಿ ಸಮಾಧಿ ಪಡೆಯಲು ದಾನಭ್ಯಾಸ.
  • ತೀವ್ರಲಾಲಸೆ ಮತ್ತು ಅಂಟುವಿಕೆಯಿಂದ ಮುಕ್ತರಾಗಲು ದಾನಭ್ಯಾಸ.
  • ಜೀವನದಲ್ಲಿ ಕುಗ್ಗದೆ, ವಿಶ್ವಾಸದಿಂದ ಜೀವಿಸಲು ದಾನಭ್ಯಾಸ.
  • ಪ್ರಶಾಂತ ಮರಣ ಪಡೆಯಲು ದಾನಭ್ಯಾಸ.
  • ಮುಂದಿನ ಜನ್ಮದಲ್ಲೂ ಸುಖಿಯಾಗಿರಲು ದಾನಭ್ಯಾಸ.
  • ಮತ್ತೆ ಮಾನವರಾಗಲು ದಾನಭ್ಯಾಸ.
  • ಸುಗತಿ ಪಡೆಯಲು ದಾನಭ್ಯಾಸ.
  • ದೇವ ದೇವತೆಗಳಾಗಲು ದಾನಭ್ಯಾಸ.
  • ಇಂದ್ರನಾಗಲು ದಾನಭ್ಯಾಸ.
  • ಬ್ರಹ್ಮಲೋಕಗಾಮಿಯಾಗಲು ದಾನಭ್ಯಾಸ.
  • ತಾನು ತನ್ನದೆಂಬ ಬಂಧನ ಮೀರಿಹೋಗಲು ದಾನಭ್ಯಾಸ.
  • ಬಹುಜನರಿಗೆ, ಬಹುಜೀವಿಗಳಿಗೆ ಹಿತಸುಖ ಕ್ಷೇಮ ತರಲು ದಾನಭ್ಯಾಸ.
  • ಪಾರಮಿಗಳು ಪರಿಪೂರ್ಣಗೊಳಿಸಲು ದಾನಭ್ಯಾಸ.
  • ವಿಶುದ್ಧರಾಗಲು, ವಿಮುಕ್ತಿ ಪಡೆಯಲು, ಬೋಧಿ ಪಡೆಯಲು ದಾನಭ್ಯಾಸ.
  • ಅಂತಿಮ ಗುರಿಯಾದ ನಿಬ್ಬಾಣ ಸಾಧಿಸಲು ದಾನಭ್ಯಾಸ.
  • ಬೋಧಿಸತ್ತರಾಗಲು ದಾನಭ್ಯಾಸ.
  • ಅನುತ್ತರವಾದ ಸಮ್ಮಾಸಂಬೋಧಿ ಪಡೆಯಲು ದಾನಭ್ಯಾಸ.
  • ಸರ್ವರಿಗೆ ದುಃಖದಿಂದ ವಿಮುಕ್ತರನ್ನಾಗಿಸಲು ದಾನಭ್ಯಾಸ.

3.2 ದಾನಕ್ಕೆ ಚಾಲನ ಬಲಗಳು
ಯಾವುದೇ ವಸ್ತುವನ್ನು ತಳ್ಳದೆ (ಬಾಹ್ಯದ ಬಲಪ್ರಯೋಗವಿಲ್ಲದೆ) ತಾನಾಗಿಯೇ ಚಲಿಸುವುದಿಲ್ಲ ಎಂದು ವಿಜ್ಞಾನಿ ನ್ಯೂಟನ್ನನ ನುಡಿಯಾಗಿದೆ.
ಭಗವಾನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ
ಕಾರಣವಿಲ್ಲದೆ ದುಃಖವಿಲ್ಲ
ಇಚ್ಛೆಯಿಲ್ಲದೆ ಕರ್ಮವಿಲ್ಲ
ದಾನವಿಲ್ಲದೆ ಸುಖವಿಲ್ಲ ಇತ್ಯಾದಿ ಶ್ರೇಷ್ಠ ಸತ್ಯಗಳನ್ನು ಶತಮಾನಗಳ ಹಿಂದೆಯೇ ನುಡಿದಿದ್ದಾರೆ. ಹಾಗಿರಬೇಕಾದರೆ ಈ ದಾನಕ್ಕೂ ಪ್ರೇರಣಾಬಲಗಳು ಇರಲೇಬೇಕು ಅವು ಹೀಗಿದೆ.
ಭಗವಾನರು ಅಂಗುತ್ತರ ನಿಕಯದಲ್ಲಿ ಎಂಟು ಚಾಲನ (ಪ್ರೇರಣ) ಬಲಗಳನ್ನು ನೀಡಿದ್ದಾರೆ, ಅವು ಹೀಗಿದೆ.
1. ದ್ವೇಷಬಲ : ಪರರಿಗೆ ಅಪಮಾನಗೊಳಿಸಲು ದಾನವನ್ನು ನೀಡುತ್ತಾರೆ, ಇಲ್ಲಿ ದ್ವೇಷವೇ ಮೂಲವಾಗಿದೆ.
2. ಭಯಬಲ : ಕೆಲವು ಜನರ ಭಯದಿಂದ ಅಥವಾ ದುರ್ಗತಿ ಭಯದಿಂದ, ಅಥವಾ ನಿಂದಾ ಭಯದಿಂದ ದಾನ ಮಾಡುವರು.
3. ಕೃತಜ್ಞತಾಬಲ : ಹಿಂದೆ ನನಗೆ ಈತನು ಸಹಾಯ ಮಾಡಿದ್ದಾನೆ. ನಾನು ಸಹಾ ಈತನಿಗೆ ಸಹಾಯ ಮಾಡಬೇಕು ಎಂಬ ಕೃತಜ್ಞತಾ ಬಲದಿಂದ ದಾನ ಮಾಡುವುದು.
4. ಆಶಾಬಲ : ಮುಂದೆ ನಮಗೆ ಒಳ್ಳೆಯದಾಗಬಹುದೆಂದು ನಂಬಿ, ಪುಣ್ಯ ಫಲಕ್ಕಾಗಿ ನಂಬಿ, ದಾನ ಮಾಡುವರು.
5. ಸಾಧುಬಲ : ದಾನ ಒಳ್ಳೆಯದು. ಆದ್ದರಿಂದ ದಾನ ಮಾಡುವೆ ಎಂದು. ಒಳ್ಳೆಯದು ಎಂಬ (ಸಾಧು) ಭಾವದಲ್ಲಿ ದಾನ ಮಾಡುತ್ತಾರೆ.
6. ಕರುಣಾಬಲ: ನಾನು ಸುಸ್ಥಿತಿಯಲ್ಲಿಹೆನು, ಪರರು ಕಷ್ಟದಲ್ಲಿದ್ದಾರೆ. ನಾನು ಆಹಾರ ಪಡೆದಿಹೆನು, ಪರರು ಪಡೆದಿಲ್ಲ. ಆದ್ದರಿಂದಾಗಿ ದಾನ ಮಾಡುವೆ ಎಂಬ ಕರುಣಾ ಬಲದಿಂದಾಗಿ ದಾನ ಮಾಡುತ್ತಾರೆ.
7. ಕೀತರ್ಿಬಲ : ದಾನ ನೀಡುವುದರಿಂದ ನನ್ನ ಖ್ಯಾತಿಯು ಹಬ್ಬುವುದು ಎಂದು ದಾನ ಮಾಡುತ್ತಾರೆ.
8. ಚಿತ್ತ ನಿಮರ್ಾಣ ಬಲ : ಚಿತ್ತ (ಮನಸ್ಸನ್ನು) ಸುಂದರವಾಗಿ, ವಿಶುದ್ಧವಾಗಿ, ನಿಮರ್ಿಸಲು, ವ್ಯಕ್ತಿತ್ವ ವಿಕಸಿಸಲು ದಾನ ಮಾಡುತ್ತಾರೆ.
3.3 ದಾನವು ಹೇಗಿರಬೇಕು?
1. ಸ್ವಚ್ಛವಾದ, ಶುದ್ಧವಾದ ವಸ್ತುಗಳನ್ನು ನೀಡಬೇಕು.
2. ಉತ್ತಮ ಆಯ್ಕೆಯ ವಸ್ತುಗಳನ್ನು ನೀಡಬೇಕು.
3. ಸಕಾಲಿಕವಾಗಿಯೇ ದಾನ ನೀಡಬೇಕು.
4. ಯೋಗ್ಯವಾದುದನ್ನೇ ದಾನ ನೀಡಬೇಕು.
5. ವಿವೇಚನಾಯುಕ್ತವಾಗಿಯೇ ದಾನ ನೀಡಬೇಕು.
6. ನಿತ್ಯವೂ ಅಥವಾ ನಿರಂತರ ದಾನ ನೀಡಬೇಕು.
7. ದಾನದ ನಂತರ ಆನಂದವಾಗಿರಬೇಕು.
3.4 ದಾನ ನೀಡುವ ಸಂದರ್ಭದಲ್ಲಿ ದಾನಿ ಹೇಗಿರಬೇಕು?
ಆನಂದದಲ್ಲಿ ಮೂರು ಬಗೆಗಳಿವೆ:
ದಾನ ನೀಡುವ ಮುನ್ನ ಆನಂದದಿಂದ ಕೂಡಿರಬೇಕು. ದಾನ ನೀಡುವಾಗ ಸಂತೃಪ್ತಿಯಿಂದ ಇರಬೇಕು ಮತ್ತು ದಾನ ನೀಡಿದ ನಂತರ ಆ ಸ್ಮರಣೆಯಿಂದ ಆನಂದ ಉಕ್ಕುತ್ತಿರಬೇಕು.
ದಾನ ಮಾಡುವ ಸಂದರ್ಭದಲ್ಲಿ ಇಚ್ಛಾಶಕ್ತಿಯಿರಬೇಕು. ಅಂದರೆ ಇಚ್ಛೆಯಿಂದ ಕೂಡಿರಬೇಕು ಮತ್ತು ಧಮ್ಮ ನಿಯಮದ ಬಗ್ಗೆ ಅಪಾರ ಶ್ರದ್ಧೆ ಹೊಂದಿರಬೇಕು.
ಇಚ್ಛೆಯಲ್ಲಿ ಮೂರು ವಿಧಗಳಿವೆ
1. ಪುಬ್ಬಚೇತನ (ಪೂರ್ವ ಇಚ್ಛೆ): ಅಂದರೆ ದಾನ ನೀಡುವ ಮುಂಚೆಯೇ ಇಚ್ಛೆ ಹೊಂದಿರುವಿಕೆ.
2. ಮುಂಚಚೇತನ (ವರ್ತಮಾನ ಇಚ್ಛೆ) : ಅಂದರೆ ದಾನ ನೀಡುತ್ತಿರುವಾಗ ಇಚ್ಛೆಯನ್ನು ಪಠಿಸುವಿಕೆ.
3. ಅಪರಚೇತನ (ನಂತರದ ಇಚ್ಛೆ): ಅಂದರೆ ದಾನ ನೀಡಿದ ನಂತರ ಇಚ್ಛೆಯನ್ನು ದೃಢೀಕರಿಸಿ ಶ್ರದ್ಧೆ ಹೊಂದಿ ಆನಂದಿಸುವಿಕೆ.
ಮತ್ತು ದಾನಿಯು ಶೀಲವಂತನಾಗಿದ್ದರೆ ಅಂತಹ ದಾನಕ್ಕೆ ಮಹತ್ಫಲ ಸಿಗುವುದು.
3.5 ಸರಿಯಾಗಿ ದಾನ ಮಾಡುವುದು ಹೇಗೆ ?

  • ಇಲ್ಲಿ ದಾನಿಯು ಪರಿಶುದ್ಧವಾದ ವಸ್ತುಗಳನ್ನು ನೀಡುತ್ತಾನೆ.
  • ಇಲ್ಲಿ ದಾನಿಯು ಉತ್ಕೃಷ್ಟವಾದುದನ್ನೇ ನೀಡುತ್ತಾನೆ.
  • ಇಲ್ಲಿ ದಾನಿಯು ಸಕಾಲದಲ್ಲಿ ದಾನ ಮಾಡುತ್ತಾನೆ.
  • ಇಲ್ಲಿ ದಾನಿಯು ಭಿಕ್ಷುಗಳಿಗೆ ಯೋಗ್ಯವಾದುದನ್ನು ಅಥವಾ ಸ್ವೀಕೃತರಿಗೆ ಯೋಗ್ಯವಾದುದನ್ನೇ ನೀಡುತ್ತಾನೆ.
  • ಇಲ್ಲಿ ದಾನಿಯು ಜೋಪಾನವಾಗಿ ನೀಡುತ್ತಾನೆ.
  • ಇಲ್ಲಿ ದಾನಿಯು ಆಗಾಗ್ಗೆ ದಾನವನ್ನು ಮಾಡುತ್ತಲೇ ಇರುತ್ತಾನೆ.
  • ಇಲ್ಲಿ ದಾನಿಯು ದಾನವನ್ನು ನೀಡುತ್ತಾ ಶಾಂತತೆ ಮತ್ತು ಆನಂದವನ್ನು ವೃದ್ಧಿಸುತ್ತಾನೆ.
  • ಇಲ್ಲಿ ದಾನಿಯು ದಾನದ ನಂತರ ಅತ್ಯಂತ ಆನಂದ ತಾಳುತ್ತಾನೆ.

ದಾನವನ್ನು ಅತ್ಯಂತ ಗೌರವಯುತವಾಗಿ ನೀಡಬೇಕೇ ಹೊರತು, ಎಸೆಯುವುದಾಗಲಿ, ಬೇಕಾಬಿಟ್ಟಿಯಾಗಿ ನೀಡುವುದಾಗಲಿ, ಅಹಂಕಾರದಿಂದ ನೀಡುವುದಾಗಲಿ ಮಾಡಕೂಡದು. ವಿನಮ್ರನಾಗಿ, ಮುಗುಳ್ನಗುತ್ತಾ, ಆನಂದಭರಿತನಾಗಿ ನೀಡಬೇಕು. ಮೈತ್ರಿಭರಿತವಾಗಿ ದಾನ ಮಾಡಬೇಕು. ಅತಿಥಿಗಳು ಭಿಕ್ಷುಗಳಾಗಿದ್ದರೆ ಭಕ್ತಿಯಿಂದ, ಗೌರವದಿಂದ ದಾನ ಮಾಡಬೇಕು. ಅತಿಥಿಗಳು ಬಡವರಾಗಿದ್ದರೆ, ರೋಗಿಗಳಾಗಿದ್ದರೆ ಕರುಣೆಯಿಂದ, ದಯೆಯಿಂದ ದಾನ ಮಾಡಬೇಕು. ಅತಿಥಿಗಳು ಮಿತ್ರರಾಗಿದ್ದರೆ ಮೈತ್ರಿಯಿಂದ, ಮುದಿತಾದಿಂದ (ಆನಂದದಿಂದ) ದಾನ ನೀಡಬೇಕು. ನೀವು ಬೇರೊಬ್ಬರನ್ನು ದಾನಕ್ಕೆ ನೇಮಿಸಿದರೂ ಸಹಾ ನೀವೂ ದಾನ ಕ್ರಿಯೆಯಲ್ಲಿ ಪಾಲ್ಗೊಂಡು ನಿಮ್ಮ ಕೈಯಾರೆ ದಾನ ಮಾಡಬೇಕು. ಮಕ್ಕಳಿಗೆ ದಾನ ನೀಡುವಾಗ ವಾತ್ಸಲ್ಯವು ನಿಮ್ಮಲ್ಲಿ ಇರಬೇಕು. ನೀವು ಸದಾ ಇರುವುದರಲ್ಲಿ ಉತ್ತಮವಾದುದನ್ನೇ ದಾನ ಮಾಡಬೇಕೇ ಹೊರತು ಬಿಸಾಡುವ ಬದಲು ದಾನ ಎಂಬ ಧೋರಣೆ ಇರಬಾರದು. ಉಪಯುಕ್ತವಾದುದನ್ನು ಆನಂದಭರಿತವಾಗಿ ನೀಡಬೇಕು.
3.6 ದಾನದ ನಂತರ ನೀವು ಹೇಗಿರಬೇಕು ?
ನೀವು ದಾನ ನೀಡಿದ ನಂತರೂ ಅದರ ಸ್ಮರಣೆಯಿಂದ ಆನಂದ ತಾಳುತ್ತಲೇ ಇರಬಹುದು. ಕೆಲವರು ಈ ಆನಂದದ ಕಾರಣದಿಂದಲೇ ಸಮಾಧಿಯನ್ನು ಹೊಂದಿರುವಂತಹ ಘಟನೆಗಳಿವೆ ಅಥವಾ ಆ ಘಟನೆಯನ್ನು ಮರೆತು ಮತ್ತೆ ಮುಂದಿನ ದಾನದ ಬಗ್ಗೆ ಯೋಚಿಸಿ, ಮತ್ತೆ ದಾನಕ್ಕೆ ಸಿದ್ಧರಾಗಬಹುದು.
ದಾನಿಗೆ ಎಷ್ಟು ದಾನ ಮಾಡಿದರೂ ತೃಪ್ತಿಯಾಗದು ಎಂಬುದು ಬೋಧಿಸತ್ವರ ಹೇಳಿಕೆಯಾಗಿದೆ. ಕೆಲವರು ತಾವು ನೀಡಿದ ದಾನದಿಂದಾಗಿ ಹಾಗು ಆ ದಾನ ಸ್ಮರಣೆಯಿಂದಾಗಿ ಮುಂದೆ ಸುಗತಿಯನ್ನು ಹೊಂದಿರುವಂತಹ ಘಟನೆಗಳು ಅಪಾರವಾಗಿ ನಮಗೆ ತಿಪಿಟಕ ಸಾಹಿತ್ಯದಲ್ಲಿ ಸಿಗುತ್ತದೆ. ಆ ಘಟನೆಯ ಪ್ರಕಾರ ದಾನಿಯು ತಾನು ಮರಣಾವಸ್ಥೆಯಲ್ಲಿರುವಾಗ ತಾನು ಮಾಡಿದ ದಾನದ ಸ್ಮರಣೆ ತಂದುಕೊಂಡು, ಆನಂದಭರಿತನಾಗಿ ಪಚ್ಚಾತ್ತಾಪವಿಲ್ಲದೆ ಸುಗತಿ ತಂದುಕೊಳ್ಳುತ್ತಾನೆ.
ದಾನದ ನಂತರ ಪಶ್ಚಾತ್ತಾಪ ಎಂದಿಗೂ ಕೂಡದು. ದಾನದ ನಂತರ ಆಯ್ಯೋ ಇಷ್ಟು ಹಣ ಪೋಲಾಯಿತಲ್ಲ, ಇದನ್ನು ನಾನೇ ಅಥವಾ ನನ್ನ ಕುಟುಂಬದವರು ಅನುಭವಿಸಬಹುದಿತ್ತಲ್ಲ ಎಂದು ಪಶ್ಚಾತ್ತಾಪಪಡಬಾರದು. ಇದರಿಂದಾಗಿ ನಿಮಗೆ ಮುಂದೆ ದಾನದ ಫಲ ಸಿಕ್ಕರೂ, ನೀವು ಅದನ್ನು ಅನುಭವಿಸಲಾರಿರಿ.
ದಾನದ ನಂತರ, ನೀವು ದಾನ ಮಾಡಿದ ವ್ಯಕ್ತಿಗಳನ್ನು ನಿಮ್ಮ ಋಣಿಗಳೆಂದು ಎಂದಿಗೂ ಭಾವಿಸಬಾರದು. ಬದಲಾಗಿ ನೀವೇ ಅವರಿಗೆ ಋಣಿಗಳಾಗಿದ್ದೀರಿ. ಏಕೆಂದರೆ ನಿಮಗೆ ಪುಣ್ಯದ ಅವಕಾಶ ಅವರು ನಿಮಗೆ ನೀಡಿದ್ದಾರೆ. ಆದ್ದರಿಂದಾಗಿ ನೀವು ಅವರನ್ನು ಆ ದೃಷ್ಟಿಯಿಂದ ನೋಡಬಾರದು. ಆ ರೀತಿ ವತರ್ಿಸಬಾರದು. ಅಹಂಕಾರದ, ದರ್ಪದ ವರ್ತನೆ ಮಾಡಕೂಡದು. ಅಷ್ಟೇ ಅಲ್ಲ, ಅವರಿಂದ ಪ್ರತಿಯಾಗಿ ದಾನದ ಅಪೇಕ್ಷೆ, ಸಹಾಯದ ಬಯಕೆಯನ್ನು ನೀವು ಇಟ್ಟುಕೊಳ್ಳಬಾರದು.
3.7 ದಾನ ನೀಡಿದ ನಂತರ ಆ ವಸ್ತುಗಳೆಲ್ಲ ಅವರದೆಯೇ?
ದಾನದ ನಂತರ ಆ ವಸ್ತುಗಳೆಲ್ಲವೂ ಖಂಡಿತವಾಗಿ ಅವರದೇ ಆಗುತ್ತದೆ. ಅದರಿಂದಾಗಿ ಆ ವಸ್ತುಗಳ ಸ್ಮರಣೆ ಸಹಾ ಪುನಃ ಮಾಡಕೂಡದು, ನಿಮ್ಮದೆಂದು ನೀವು ಎಂದಿಗೂ ಭಾವಿಸಬಾರದು. ಅವರು ಆ ವಸ್ತುಗಳನ್ನು ಸದ್ಭಳಕೆ ಮಾಡಬಹುದು. ಅಥವಾ ಇನ್ನೊಬ್ಬರಿಗೆ ನೀಡಬಹುದು ಅಥವಾ ಬಳಕೆಯೇ ಮಾಡದಿರಬಹುದು. ಅದನ್ನು ಕುರಿತು ನೀವು ಯೋಚಿಸಬಾರದು. ಒಮ್ಮೆ ದಾನ ನೀಡಿದ ಬಳಿಕ ನೀವು ಅದನ್ನೆಲ್ಲಾ ಯೋಚಿಸಬಾರದು. ಅವರು ಹೀಗೆಯೇ ಬಳಸಲಿ ಅಥವಾ ಹೀಗೆ ಬಳಸದಿರಲಿ ಅಥವಾ ನನ್ನ ಜ್ಞಾಪಕವಾಗಿ ಇಟ್ಟುಕೊಳ್ಳಲಿ ಎಂದು ಭಾವಿಸಬಾರದು. ಅವರಿಗೆ ಅದನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳಲು ಪೂರ್ಣವಾದ ಅಧಿಕಾರವಿರುತ್ತದೆ. ದಾನದ ಸಮಯದಲ್ಲಿ ಕರಾರು ಅಥವಾ ಒಪ್ಪಂದ ಹಾಕಿ ದಾನ ನೀಡಬಾರದು. ಮೊದಲೇ ಯೋಚಿಸಿ ದಾನ ಮಡಿ, ನಂತರ ಅವರು ಅದನ್ನು ಏನೇ ಮಾಡಲಿ, ಅವನ್ನೆಲ್ಲಾ ಚಿಂತಿಸಬಾರದು.
ದಾನ ಸ್ವೀಕಾರ ಮಾಡಿದವರು ನಿಮ್ಮ ಸೇವಕರಲ್ಲ ಅಥವಾ ಋಣಿಗಳೂ ಅಲ್ಲ. ಇದನ್ನು ಸದಾ ನೀವು ನೆನಪಿಟ್ಟುಕೊಂಡು ಅಹಂಕಾರ ತ್ಯಜಿಸಬೇಕು. ನನ್ನದು ಎಂಬ ಭಾವ ಬಿಡಬೇಕು. ಏಕೆಂದರೆ ದಾನದ ಉದ್ದೇಶವೇ ನಾನು ಮತ್ತು ನನ್ನದು ಎಂಬ ಅಹಂಕಾರ ಮತ್ತು ಸ್ವಾರ್ಥವನ್ನು ತ್ಯಜಿಸುವುದಾಗಿದೆ. ಆಗಲೇ ಅದರಿಂದಾಗಿ ನೀವು ದುಃಖದಿಂದ, ಜನ್ಮದಿಂದ ಮುಕ್ತರಾಗುವಿರಿ.
3.8 ದಾನ ಎಷ್ಟು ನೀಡಬೇಕು ?
ದಾನವನ್ನು ಇಷ್ಟೇ ನೀಡಬೇಕು ಅಥವಾ ಇಷ್ಟು ನೀಡಬಾರದು ಎಂಬ ನಿಯಮವೇನಿಲ್ಲ. ಅದು ನಿಮ್ಮ ದಾನ ಹೃದಯ ವಿಶಾಲತೆ, ನಿಮ್ಮ ಸಾಮಥ್ರ್ಯ, ನಿಮ್ಮಲ್ಲಿನ ವಸ್ತುಗಳನ್ನು ಅವಲಂಬಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಪರಿಸ್ಥಿತಿಯನ್ನು ಅವಲಂಬಿಸಿದೆ. ನಿಮ್ಮಲ್ಲಿ ನೀಡಲು ಏನೂ ಇರದಿದ್ದರೂ ಸಹಾ ದಾನದ ಇಚ್ಛೆ ನಿಮ್ಮಲ್ಲಿರಬೇಕು. ಅದುವೇ ದಾನದಲ್ಲಿ ಮಹತ್ತರ ಪಾತ್ರ ವಹಿಸುವಂತಹದ್ದಾಗಿದೆ.
ನಿಮ್ಮಲ್ಲಿ ಅಪಾರ ಐಶ್ವರ್ಯ ತುಂಬಿ ತುಳುಕಾಡುತ್ತಿದ್ದರೂ, ನಿಮ್ಮಲ್ಲಿ ದಾನದ ಇಚ್ಛೆ ಇಲ್ಲದಿದ್ದರೆ ನಿಮ್ಮ ದಾನ ಗುಣ ಶೂನ್ಯವಾಗಿರುತ್ತದೆ. ಹಾಗೆಯೇ ನಿಮ್ಮಲ್ಲಿ ಪುಡಿಗಾಸು ಇಲ್ಲದಿದ್ದರೂ ದಾನ ಇಚ್ಛೆಯು ಸೇವಾ ಮನೋಭಾವವು ಇದ್ದಾಗ, ನೀವು ಬಹಳಷ್ಟು ಖಂಡಿತ ಮಾಡುವಿರಿ. ನೀವು ಅವರ ಕುರಿತು ಸ್ವಲ್ಪ ಯೋಚಿಸಬೇಕಷ್ಟೆ.
ದಾನದಿಂದಾಗಿ ನಿಮ್ಮ ಹಾನಿಯು ಆಗಬಾರದು, ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಇಚ್ಛೆಗೆ ಅನುಗುಣವಾಗಿ ನೀವು ದಾನ ಮಾಡಬಹುದು. ಇಲ್ಲಿ ಯಾವುದೂ ನಿಗಧಿತತೆಯಿಲ್ಲ. ಇಲ್ಲಿ ನೀವು ಸುಖವಾಗಿ ಇರಬೇಕು ಹಾಗೆಯೇ ಪರರು ಸುಖಿಯಾಗಿ ಇರಬೇಕು. ಒಟ್ಟರೆ ಸರ್ವರ ಹಿತವಾಗಬೇಕು, ಹಾಗಲ್ಲದಿದ್ದರೂ ಬಹುಜನ ಹಿತಾಯ, ಬಹುಜನ ಸುಖಾಯ ಆಗಲೇಬೇಕು.
3.9 ದಾನದಲ್ಲಿ ಇಚ್ಛೆಯ (ಚೇತನಾ) ಪಾತ್ರ
ಇಚ್ಛೆಯೇ ಕರ್ಮ ಎಂದು ಬುದ್ಧ ಭಗವಾನರು ಹೇಳಿದ್ದಾರೆ. ಇಚ್ಛೆಯಿಲ್ಲದೆ ದೇಹದಿಂದಾಗುವ ಯಾವುದೇ ಕಾರ್ಯವಾಗಲಿ, ಯಾವುದೇ ಯೋಚನಾ ಸಮೂಹವಾಗಲಿ ಅಥವಾ ಮಾತುಗಳಾಗಲಿ ಚಲಿಸಲಾರವು. ಈ ಇಚ್ಛೆಯನ್ನೇ ಆರ್ಯ ಅಷ್ಠಾಂಗಮಾರ್ಗದ ಎರಡನೆಯ ಅಂಗವಾದ ಸಮ್ಮಾಸಂಕಪ್ಪ ಅಥವಾ ಯೋಗ್ಯವಾದ ಸಂಕಲ್ಪ ಎಂದು ಹೇಳಿರುತ್ತಾರೆ.
ನಿಮಗೆ ದಾನದ ಇಚ್ಛೆ ಬರಬೇಕಾದರೆ ನಿಮಗೆ ದಾನದ ಬಗ್ಗೆ ಯೋಗ್ಯ ದೃಷ್ಟಿಕೋನ ಇರಬೇಕು ಅಥವಾ ಯೋಗ್ಯ ದೃಷ್ಟಿಕೋನ ಉಂಟಾಗಬೇಕು. ಅದು ಸಾಧ್ಯವಾಗುವುದು ಯಾವಾಗ ಎಂದರೆ ದಾನದಿಂದಾಗುವ ಲಾಭವನ್ನು ನೀವು ನೋಡಬೇಕು ಅಥವಾ ಕೇಳಬೇಕು ಅಥವಾ ಅನುಭವಿಸಬೇಕು ಅಥವಾ ಅದರ ಬಗ್ಗೆ ಚಿಂತನೆ ಮಾಡಬೇಕು ಅಥವಾ ಬುದ್ಧವಚನವನ್ನು ಅಭ್ಯಸಿಸಬೇಕು ಅಥವಾ ಕೇಳಬೇಕು. ಹಾಗೆ ಮಾಡಿದಾಗ ನಿಮಗೆ ದಾನದ ಮೌಲ್ಯ ಅರಿವಾಗಿ, ಲೋಭದ ದುಷ್ಪರಿಣಾಮ ಅರಿವಾಗಿ ನೀವು ದಾನದ ಬಗ್ಗೆ ಸಂಕಲ್ಪಿಸುವಿರಿ.
ದಾನದಲ್ಲಿ ಸಂಕಲ್ಪವು ಮೂರು ವಿಧದ್ದಾಗಿದೆ.
1. ಪೂರ್ವ ಇಚ್ಛೆ : ಅಂದರೆ ದಾನದ ಹಿಂದೆಯೇ ದಾನ ಮಾಡಬೇಕೆಂದು ಸಂಕಲ್ಪ ಮತ್ತು ಆ ದಾನಕ್ಕೆ ಇಂತಹುದೇ ಫಲ ಸಿಗಬೇಕೆಂದು ನೀವು ಸಂಕಲ್ಪಿಸಿರಬೇಕು. ಹಾಗು ನೀಡಲು ಹಾತೊರೆದು ಆನಂದಿಸಬೇಕು. ಅದಕ್ಕಾಗಿ ಯೋಜನೆ ಹಾಗು ಸಿದ್ಧತೆ ನಡೆಸಬೇಕು.
2. ದಾನ ಮಾಡುವಾಗ ಇಚ್ಛೆ : ಅಂದರೆ ನೀವು ದಾನ ಮಾಡುವಾಗ ಆನಂದಿಸುತ್ತಾ, ಆ ದಾನ ಫಲದ ಇಚ್ಛೆಯನ್ನು ಮನದಲ್ಲಿಯೇ ಪಠಿಸಬೇಕು. ಅಥವಾ ಭಿಕ್ಷುಗಳ ಮುಂದೆ ಅದನ್ನು ವ್ಯಕ್ತಪಡಿಸಬೇಕು. ಆಗ ಅವರು ಹಾಗೇ ಆಗಲಿ, ತಥಾಸ್ತು ಎಂದು ಹಾರೈಸುತ್ತಾರೆ.
3. ದಾನದ ನಂತರ ಇಚ್ಛೆ : ದಾನ ನೀಡಿದ ನಂತರ ನೀವು ಒಂದು ಪ್ರಶಾಂತ ಸ್ಥಳದಲ್ಲಿ ಕುಳಿತುಕೊಂಡು ಧ್ಯಾನಸ್ಥರಾಗಿ, ದಾನದ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ದಾನದ ಸ್ಮರಣೆ ಮಾಡಿ ಅದಕ್ಕೆ ಈ ಬಗೆಯಲ್ಲೇ ಫಲ ದೊರೆಯಲಿ ಎಂದು ಇಚ್ಛೆ ವ್ಯಕ್ತಪಡಿಸಬೇಕು. ಹಾಗು ಆ ಸಂಕಲ್ಪದ ಬಗ್ಗೆ ಅಪಾರ ಶ್ರದ್ಧೆವುಳ್ಳವರಾಗಿರಬೇಕು.
ಈ ರೀತಿಯ ಇಚ್ಛಾಸಹಿತ ದಾನವು ಮಹತ್ಫಲವನ್ನು ನೀಡುವುದೇ ವಿನಃ ಸುಮ್ಮನೆ ದಾನ ಮಾಡಿಬಿಟ್ಟರೆ ಅಷ್ಟಾಗಿ ಫಲಸಿಗಲಾರದು. ಇಚ್ಛಾಸಹಿತ ದಾನಕ್ಕೆ ಪ್ರಜ್ಞೆಯೊಂದಿಗೆ ಕೂಡಿದ ದಾನ ಅಥವಾ ಉಪಾಯ ಕೌಶಲ್ಯ ಭರಿತ ದಾನ ಎನ್ನುತ್ತಾರೆ.
3.10 ದಾನ ಎಲ್ಲಿ ನೀಡಬೇಕು ?
ಒಂದು ವಿಧದಲ್ಲಿ ಯೋಚಿಸಿದರೆ ಪ್ರತಿಯೊಂದು ಸ್ಥಳವೂ ಪವಿತ್ರವೇ ಆಗಿದೆ. ನಾವು ದಾನ ಮಾಡುವ ಸ್ಥಳ ನಮ್ಮ ಮನೆಯೂ ಆಗಬಹುದು, ವಿಹಾರಗಳಲ್ಲಿಯೂ ದಾನ ಮಾಡಬಹುದು, ಆಸ್ಪತ್ರೆಯಲ್ಲಿ ಹೋಗಿ ರಕ್ತದಾನ ಮಾಡಬಹುದು. ಮಕ್ಕಳಿಗೆ ಉಚಿತ ಶಿಕ್ಷಣ ನಿದರ್ಿಷ್ಟ ಸ್ಥಳದಲ್ಲಿ ಮಾಡಬಹುದು ಅಥವಾ ಅದಕ್ಕೆ ಆಥರ್ಿಕ ಸಹಾಯ ಮಾಡಬಹುದು. ಒಟ್ಟಾರೆ ಹೇಳಬೇಕೆಂದರೆ ಎಲ್ಲೆಲ್ಲಿ ಸಹಾಯದ ಕೊರತೆಯಿದೆಯೋ, ಸುಖದ ಅಭಾವವಿದೆಯೋ, ಎಲ್ಲೆಲ್ಲಿ ದುಃಖಿತರು ಇರುವರೋ ಅಲ್ಲೆಲ್ಲಾ ನಿಮ್ಮ ದಾನದ, ಸಹಾಯದ ಅವಶ್ಯಕತೆ ಇದ್ದೇ ಇದೆ. ಅದೆಲ್ಲವೂ ನಿಮ್ಮ ಕಾರ್ಯಕ್ಷೇತ್ರವಾಗುತ್ತದೆ.
3.11 ದಾನ ಯಾವಾಗ ನೀಡಬೇಕು?
ಪ್ರತಿಯೊಂದು ದಿನವೂ ಉತ್ತಮವಾದ ದಿನವೇ ಆಗಿದೆ.
ದಾನಕ್ಕೆ ಇಂತಹುದೇ ದಿನ ನೀಡಬೇಕೆಂದು ನಿಗಧಿತತೆ ಇಲ್ಲ. ಆದರೂ ಬಹಳಷ್ಟು ಜನರು ಯಾವಾಗಲಾದರೂ ನೀಡಬಹುದೆಂದು ದಾನವನ್ನು ಮುಂದೂಡುತ್ತಲೇ ಇರುತ್ತಾರೆ. ಈ ಮುಂದೂಡಿಕೆಯನ್ನು ತಪ್ಪಿಸಲು ದಾನಿಗಳು ನಿಗದಿತತೆ ಅಥವಾ ನಿಧರ್ಿಷ್ಟ ಸಮಯ, ಅಥವಾ ನಿಧರ್ಿಷ್ಟ ದಿನ ಅಥವಾ ದಿನಾಂಕ ಇಟ್ಟುಕೊಳ್ಳುವುದು ಹಿತವಾದುದು ಆಗಿದೆ. ಕೆಲವರು ಪ್ರತಿನಿತ್ಯ ಬೌದ್ಧ ಭಿಕ್ಖುಗಳಿಗೆ ಆಹಾರ ದಾನ ಮಾಡುತ್ತಾರೆ. ಹಾಗೆಯೇ ಪೌರ್ಣಮಿಗಳಲ್ಲಿಯೂ ಕೆಲವರು ದಾನದ ಆಚರಣೆ ಇಟ್ಟುಕೊಳ್ಳುತ್ತಾರೆ. ಅವರವರ ಸಾಮಥ್ರ್ಯ, ಕಾಲದ ಬಿಡುವು ಹಾಗು ದಾನದ ಅಭಿಲಾಷೆಯಂತೆ ಕಾರ್ಯ ನಡೆಯುತ್ತದೆ. ಆದರೂ ನಾವು ಪ್ರತಿವರ್ಷ, ಪ್ರತಿತಿಂಗಳು, ಪ್ರತಿವಾರ ಪ್ರತಿದಿನ ಯಾರಿಗಾದರೂ ಯಾವುದೇ ರೀತಿಯಲ್ಲೂ ಸಹಾಯ ಮಾಡುತ್ತಿದ್ದರೆ ಅದು ದಿವ್ಯವಾದ ಆನಂದ ಸವಿಯಲು ಆಧಾರವಾಗುತ್ತದೆ.
3.12 ಶ್ರದ್ಧೆಯ ಮೂರು ಲಕ್ಷಣಗಳು
ಯಾವುದಾದರೂ ಉಪಾಸಕನು ಮಹಾ ಶ್ರದ್ಧೆಯುಳ್ಳವ ಎಂದು ಕೇಳುತ್ತೇವೆ. ಆದರೆ ಅಂತಹವನು ನಿಜಕ್ಕೂ ಮಹಾ ಶ್ರದ್ಧೆಯುಳ್ಳವನೇ ಎಂದು ನಾವು ಪರೀಕ್ಷಿಸಿ ತಿಳಿಯಬಹುದು. ಅದರ ತಾಳೆ ಹೀಗಿದೆ.
ಆತನು ಶೀಲವಂತನನ್ನು ನೋಡಲು ಇಚ್ಛಿಸುತ್ತಾನೆ. ಆತನು ಸಧಮ್ಮವನ್ನು ಆಲಿಸಲು ಇಚ್ಛಿಸುತ್ತಾನೆ. ಆತನ ಹೃದಯವು ಲೋಭದಿಂದ ಮುಕ್ತವಾಗಿರುತ್ತದೆ. ಆತನು ಮನೆಯಲ್ಲಿರುವಾಗ, ಸಹೃದಯ ದಾನಿಯಾಗಿರುತ್ತಾನೆ, ಶುದ್ಧಹಸ್ತದವನಾಗಿರುತ್ತಾನೆ, ನಿಸ್ವಾರ್ಥತೆಯಲ್ಲಿ ಆನಂದಿಸುತ್ತಾನೆ. ಸಹಾಯ ಯಾಚಿಸಿದರೆ ಸಾಕು, ಉಡುಗೊರೆಗಳನ್ನು ಪರರಲ್ಲಿ ಹಂಚಿಕೊಳ್ಳಲು ಆನಂದಿಸುತ್ತಾನೆ. ಈ ಮೂರು ಲಕ್ಷಣಗಳಿಂದ ಒಬ್ಬನ ಶ್ರದ್ಧೆಯನ್ನು ಗುರುತಿಸಬಹುದು.
ಸಿರಿವಂತಿಕೆಯು ಮೂರ್ಖನಿಗೆ ಮಾತ್ರ ಹಾನಿ ಮಾಡುವುದು
3.13 ದಾನದ ನಂತರ ಆನಂದಿಸಿ
ಒಮ್ಮೆ ಭಗವಾನರು ಜೇತವನದ ವಿಹಾರದಲ್ಲಿ ತಂಗಿದ್ದರು. ಆಗ ರಾಜ ಪಸೇನದಿಯು ಭಗವಾನರಿಗೆ ವಂದಿಸಲು ಬಂದನು. ಆತನು ನಿಧಾನವಾಗಿ ಬಂದುದಕ್ಕೆ ಹೀಗೆ ಕಾರಣವನ್ನು ವಿವರಿಸಿದನು. ಶ್ರಾವಸ್ತಿಯಲ್ಲಿ ಶ್ರೀಮಂತನೊಬ್ಬನಿದ್ದನು. ಆದರೆ ಆತನಿಗೆ ಮಕ್ಕಳು ಯಾರೂ ಇಲ್ಲದ ಕಾರಣ, ರಾಜನು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡನು. ಅದು ದೇಶದ ಆಸ್ತಿಯಾಯಿತು. ಆತನು ಅಗರ್ಭ ಶ್ರೀಮಂತನಾಗಿದ್ದರೂ ಸಹಾ ಯಾರಿಗೂ ದಾನ ನೀಡುತ್ತಿರಲಿಲ್ಲ, ಅಪಾರ ಜಿಪುಣನಾಗಿದ್ದನು. ಅಷ್ಟೇ ಅಲ್ಲ, ಆತನು ಸಹಾ ಜೀವನವಿಡೀ ಯಾವ ಸುಖವನ್ನೂ ಅನುಭವಿಸಲಿಲ್ಲ. ಕೇವಲ ದುಡ್ಡು ನೋಡಿಯೇ ಆನಂದಿಸುತ್ತಿದ್ದನು. ಆತನು ಉಡುತ್ತಿದ್ದ ವಸ್ತ್ರಗಳಾಗಲಿ, ಬಳಸುತ್ತಿದ್ದ ವಸ್ತುಗಳಾಗಲಿ ಅವೆಲ್ಲವೂ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದವು. ಆತನೇ ಬಿಕಾರಿಯಂತಿದ್ದನು. ಈತನ ಈ ದುರ್ಗತಿಗೆ ಕಾರಣವೇನೆಂಬುದು ರಾಜನು ಭಗವಾನರಲ್ಲಿ ಕೇಳಿಕೊಂಡನು.
ಆಗ ಭಗವಾನರು ಆ ಶ್ರೀಮಂತ ಪೂರ್ವ ವೃತ್ತಾಂತವನ್ನು ಹೇಳಿದರು. ಆತನು ಹಿಂದಿನ ಜನ್ಮದಲ್ಲಿಯೂ ಶ್ರೀಮಂತನಾಗಿದ್ದನು. ಒಂದುದಿನ ಆತನು ಮನೆಯಲ್ಲಿರುವಾಗ ಪಚ್ಚೇಕ ಬುದ್ಧರು ಆಹಾರಕ್ಕಾಗಿ ಬಾಗಿಲ ಬಳಿ ನಿಂತುದ್ದನ್ನು ಕಂಡನು. ಆತನು ತನ್ನ ಪತ್ನಿಗೆ ದಾನ ನೀಡಲು ಅನುಮತಿ ನೀಡಿದನು. ಆಕೆಯು ಆ ಪಚ್ಛೇಕ ಬುದ್ಧರಿಗೆ ಪಿಂಡಪಾತ್ರೆಯನ್ನು ತುಂಬುವ ಹಾಗೆ ಉತ್ತಮ ಭೋಜ್ಯವನ್ನು ನೀಡಿದಳು. ನಂತರ ಶ್ರೀಮಂತನು ಪಚ್ಛೇಕ ಬುದ್ಧರನ್ನು ನೋಡಿದನು. ಹಾಗೆಯೇ ಅವರ ಪಿಂಡಪಾತ್ರೆಯನ್ನು ನೋಡಿದನು. ಆಗ ಕಸಿವಿಸಿಗೊಂಡ ಆತನು ಈ ಬಗೆಯಲ್ಲಿ ಆಲೋಚಿಸಿದನು: ಓಹ್ ಈ ಭಿಕ್ಷುವು ಈ ಆಹಾರ ಸೇವಿಸಿ ಮಲಗಿ ನಿದ್ರಿಸಬಹುದು. ಇದರ ಬದಲು ನನ್ನ ಸೇವಕರಿಗೆ ಆಹಾರ ನೀಡಿದ್ದರೆ, ಅವರು ಉತ್ತಮವಾಗಿ ಕೆಲಸವನ್ನಾದರೂ ಮಾಡುತ್ತಿದ್ದರು.
ಹೀಗೆ ಆತನು ದಾನದ ನಂತರ ಆನಂದಿಸದ ಕಾರಣದಿಂದಾಗಿ ಆತನು ದಾನವು ಫಲವಾಗಿ ಶ್ರೀಮಂತನಾಗಿ ಹುಟ್ಟಿದ್ದರೂ ಸಹಾ, ದಾನದ ನಂತರ ಆನಂದಿಸದ ಕಾರಣವಾಗಿ ಆತನು ಯಾವ ಸುಖ-ಭೋಗವನ್ನು ಅನುಭವಿಸಲಿಲ್ಲ. ಕಡುಬಡವನಂತೆಯೇ ಜೀವನವನ್ನು ನಡೆಸಿದನು.
ಆತನಿಗೆ ಮಕ್ಕಳಾಗದ್ದಕ್ಕೂ ಕಾರಣವಿತ್ತು. ಅದೇನೆಂದರೆ ಆತನು ಆ ಹಿಂದಿನ ಜನ್ಮದಲ್ಲಿಯೇ ಆಸ್ತಿಗಾಗಿ ತನ್ನ ಸೋದರನ ಮಗನನ್ನು ಕೊಂದಿದ್ದನು. ಇದರ ಪರಿಣಾಮವಾಗಿ ಮುಂದಿನ ಏಳು ಜನ್ಮದಲ್ಲಿ ನರಕದಲ್ಲಿ ಹುಟ್ಟಿದನು. ನಂತರದ ಜನ್ಮದಲ್ಲಿ ಮಾನವನಾಗಿ ಹುಟ್ಟಿದರೂ ಸಹಾ ಹೀಗೆ ಯಾವ ಪುಣ್ಯಕರ್ಮ ಮಾಡಲಿಲ್ಲ. ಹೀಗೆ ಶ್ರೀಮಂತನಿಗೆ ಐಶ್ವರ್ಯಗಳು ಸಿಕ್ಕಿದರೂ ಸಹಾ ಅದು ಆತನ ಹಾನಿಗಾಗಿಯೇ ಸಹಾಯವಾಗುತ್ತದೆ. ಈತನ ವೃತ್ತಾಂತ ತಿಳಿಸಿ ಭಗವಾನರು ಈ ಗಾಥೆಯನ್ನು ನುಡಿದರು:
ಸಿರಿವಂತಿಕೆಯು ದುಮರ್ೆಧದವನಿಗೆ (ಮೂರ್ಖ)
ಹಾಳು ಮಾಡುವುದು, ಹೊರತು
ಆಚೆಯ ದಡವನ್ನು (ನಿಬ್ಬಾಣದ) ಅನ್ವೇಷಿಸುವವನಿಗಲ್ಲ,
ಐಶ್ವರ್ಯಕ್ಕೆ ಹಾತೊರೆಯುತ್ತ ಮೂರ್ಖನು
ಪರರನ್ನು ಹಾಳು ಮಾಡುವಂತೆ, ತನ್ನನ್ನೇ ನಾಶಗೊಳಿಸಿಕೊಳ್ಳುತ್ತಾನೆ.
ಭೂತಗಳು ವಾಸಿಸುವಂತಹ ಸ್ಥಳಗಳಲ್ಲಿರುವ
ನೀರಿನಂತೆ ಅಯೋಗ್ಯ ವ್ಯಕ್ತಿಯಲ್ಲಿ ಸಂಗ್ರಹವಾಗಿರುವ
ಐಶ್ವರ್ಯವು ವ್ಯರ್ಥವೇ ಸರಿ.
ಅದರಿಂದಾಗಿ ತನಗಾಗಲಿ ಲಾಭವಿಲ್ಲ,
ಪರರಿಗೂ ಲಾಭವಿಲ್ಲ.
ಆದರೆ ಯೋಗ್ಯ ವ್ಯಕ್ತಿಯಲ್ಲಿ
ಸಂಗ್ರಹವಾಗಿರುವ ಐಶ್ವರ್ಯವು
ಪರಮ ಲಾಭಕಾರಿ
ಅದರಿಂದಾಗಿ ತಾನು ನಿಂದಾತೀತನಾಗಿ ಸುಗತಿ
ಪ್ರಾಪ್ತಿಮಾಡಿ ಪರರಿಗೂ ಆಧಾರವಾಗಿ
ಕರ್ತವ್ಯನಿಷ್ಠನಾಗಿರುತ್ತಾನೆ.

3.14 ದಾನಿಯು ಪ್ರಜ್ಞಾವಂತನಾಗಿರಬೇಕು ಹೊರತು ಮೂರ್ಖನಾಗಬಾರದು

ದಾನ ನೀಡುವುದೇ ಪರಹಿತಕ್ಕಾಗಿಯೇ. ಹಾಗಿರುವಾಗ ನಾವು ಆ ದಿಕ್ಕಿನಲ್ಲಿ ಜೀವಿಸುವಾಗ, ಪ್ರಜ್ಞಾಶೀಲತೆ ಬಳಸಿ ಸಾಧ್ಯವಾದಷ್ಟು ಪರರಿಗೆ ಹಿತವಾಗುವ ರೀತಿಯಲ್ಲಿ ಜೀವಿಸಬೇಕಾಗುತ್ತದೆ. ದಾನದಲ್ಲಿ ಅಥವಾ ಸಹಾಯದಲ್ಲಿ ಪ್ರಜ್ಞಾ ಇಲ್ಲದಿದ್ದರೆ ಅದು ಅಪಾಯಕ್ಕೂ ಎಡೆಮಾಡಿಕೊಡಬಹುದು. ಅದಕ್ಕಾಗಿ ಈ ಜಾತಕವೇ ಸಾಕ್ಷಿಯಾಗಿದೆ.
ಬಹುಕಾಲದ ಹಿಂದೆ ಬೋಧಿಸತ್ತರು ಕಾಶಿಯ ಪಕ್ಕದಲ್ಲಿನ ಹಳ್ಳಿಯಲ್ಲಿ ಬಡಗಿಗಳ ಮನೆಯಲ್ಲಿ ತಂಗಿದ್ದರು. ಆ ಮನೆಯಲ್ಲಿ ವೃದ್ಧ ಬಡಗಿಯವನು ಮರವನ್ನು ಕೊಯ್ಯುತ್ತಿದ್ದನು. ಆತನಿಗೆ ತಲೆಯಲ್ಲಿ ಕೂದಲು ಇಲ್ಲದೆ ಬೊಕ್ಕತಲೆಯವನಾಗಿದ್ದನು. ಆತನ ತಲೆಯ ಮೇಲೆ ಸೊಳ್ಳೆಯೊಂದು ಹಾರುತ್ತ ಬಂದು ಬಂದು ಕೊಂಡಿಯಿಂದ ಚುಚ್ಚುತ್ತಿತ್ತು. ಆತನು ಹತ್ತಿರದಲ್ಲಿದ್ದ ಮಗನನ್ನು ಸೊಳ್ಳೆಯನ್ನು ಹೊಡೆದು ಓಡಿಸು ಎಂದು ಆಜ್ಞಾಪಿಸಿದನು. ಪಿತೃವಾಕ್ಯ ಪಾಲನೆಗಾಗಿ ಆ ಮಗನು ತಂದೆಯ ಹಿಂದೆ ನಿಂತು ಓಡಿಸಲು ಮುಂದಾದ. ಅದು ಪುನಃ ತಪ್ಪಿಸಿಕೊಂಡು ತಲೆಯ ಬಳಿ ಕುಳಿತು ಪುನಃ ಕಚ್ಚಿತು. ಇದರಿಂದ ಕ್ರೋಧಗೊಂಡ ಮಗನು ಕೊಡಲಿಯನ್ನು ಎತ್ತಿಕೊಂಡು ಸೊಳ್ಳೆಯನ್ನು ಒಡೆಯಲೆಂದು ಜೋರಾಗಿ ಬೀಸಿ ಒಡೆದ. ಆ ಏಟಿಗೆ ವೃದ್ಧ ತಂದೆಯ ತಲೆಯನ್ನೇ ಎರಡು ಹೋಳು ಮಾಡಿಬಿಟ್ಟನು. ಅಲ್ಲಿ ಶೋಕ ಪ್ರಲಾಪಗಳು ಉಂಟಾಯಿತು.
ಅದನ್ನು ಗಮನಿಸಿದ ಬೋಧಿಸತ್ವರು ಹೀಗೆ ಯೋಚಿಸಿದರು: ಬುದ್ಧಿವಂತನಾದ ಶತ್ರುವು, ಮೂರ್ಖ ಮಿತ್ರನಿಗಿಂತ ಸಾವಿರ ಪಾಲು ಮೇಲು. ಆತನು ಹೀಗೆ ಪ್ರಾಣಾಪಾಯ ತರುವುದಿಲ್ಲ. ಸಹಾಯ ಮಾಡುವ ಮನಸ್ಸಿದ್ದರೆ ಸಾಲದು, ವಿವೇಕಿಯಾಗಿರಬೇಕು, ಇಲ್ಲದಿದ್ದರೆ ಹೀಗೆ ಸಹಾಯದ ಬದಲು ಅನರ್ಥ ಅಪಾಯಗಳೇ ಸಂಭವಿಸುವುದು.

3.15 ದಾನವು ಎಷ್ಟೇ ಚಿಕ್ಕದಾಗಿರಲಿ ಅದನ್ನು ಅಲ್ಪವೆಂದು ಎಣಿಸಬೇಡಿ

ಒಮ್ಮೆ ಶ್ರಾವಸ್ತಿಯ ವ್ಯಕ್ತಿಯೊಬ್ಬನು ಭಗವಾನರ ಬೋಧನೆಯನ್ನು ಆಲಿಸಿ ಅಪಾರವಾಗಿ ಉತ್ತೇಜಿತನಾದನು. ಆತನು ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ದಾನ ನೀಡಲು ನಿರ್ಧರಿಸಿದನು. ಆದರೆ ಈ ದಾನ ಕಾರ್ಯದಲ್ಲಿ ಪರರು ಸಹಾಯ ಮಾಡಿದರೆ ಅವರೆಲ್ಲರಿಗೂ ಸಹಾ ಪುಣ್ಯದಲ್ಲಿ ಫಲ ಸಿಗುವುದೆಂದು ಯೋಚಿಸಿ, ಆತನು ಜೇತವನದಲ್ಲಿದ್ದ ಬುದ್ಧರಿಗೆ ಮತ್ತು ಸಂಘಕ್ಕೆ ಮಾರನೆಯದಿನ ಊಟಕ್ಕೆ ಆಹ್ವಾನಿಸಿದನು. ನಂತರ ಆತನು ತಾನು ವಾಸವಾಗಿದ್ದ ಸುತ್ತಮುತ್ತಲಿನ ಎಲ್ಲಾ ಮನೆಯವರಿಂದ ದಾನಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿದನು. ಅವರಿಗೆಲ್ಲಾ ದಾನದ ಮಹತ್ವತೆ ಸಾರಿದನು. ಅವರೆಲ್ಲರೂ ಸಹಾ ಆಹಾರಕ್ಕೆ ಬೇಕಾಗುವ ಸಾಮಗ್ರಿಗಳನ್ನು ತಮ್ಮ ಕೈಲಾದಷ್ಟು ನೀಡುತ್ತಿದ್ದರು. ಅದೇ ಬೀದಿಯಲ್ಲಿ ಒಬ್ಬ ಜಿಪುಣ ಶ್ರೀಮಂತನಿದ್ದನು. ಆತನೇ ಬಿಲಾಲಪದಾಕ. ಈ ಬಿಲಾಲಪದಾಕನಿಗೆ ಈ ದಾನಿಯ ನಡವಳಿಕೆ ಇಷ್ಟವಾಗಲಿಲ್ಲ. ಆ ದಾನಿಯ ಬಗ್ಗೆ ಹೀಗೆ ಗೊಣಗಿಕೊಂಡನು. ಈ ನೀಚ ಮನುಷ್ಯನು ದಾನವನ್ನು ಮಾಡುವುದಾದರೆ ತಾನೇ ಮಾಡಬೇಕು, ಏತಕ್ಕಾಗಿ ಹೀಗೆ ಎಲ್ಲರಿಗೂ ದಾನ ನೀಡುವಂತೆ ಈತನು ಪೀಡಿಸುತ್ತಿರುವನು ಎಂದು. ಆದರೂ ಆ ಬಿಲಾಲಪದಾಕನು ಅತಿಸ್ವಲ್ಪ ಅಕ್ಕಿ, ಅತ್ಯಲ್ಪ ಬೆಣ್ಣೆ ಮತ್ತು ಸ್ವಲ್ಪ ಬೆಲ್ಲವನ್ನು ದಾನ ನೀಡಿದನು. ಅವನು ಅದನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋದನು, ಅದರಲ್ಲಿ ಸೇರಿಸಲಿಲ್ಲ. ಆಗ ಆ ಶ್ರೀಮಂತನಿಗೆ ತನ್ನನ್ನು ಅವಮಾನಗೊಳಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುತ್ತಿರುವನು ಎಂದು ಸಂಶಯಿಸಿದನು. ಇದನ್ನು ಅರಿಯುವುದಕ್ಕಾಗಿ ಆತನು ತನ್ನ ಸೇವಕನನ್ನು ಹಿಂಬಾಲಿಸಲು ಕಳುಹಿಸಿದನು.
ಆ ದಾನಿಯು ಶ್ರೀಮಂತನಿಗೂ ಮಹಾ ಲಾಭ ದೊರೆಯುವಂತಾಗಲು ಆ ಅಕ್ಕಿ, ಬೆಲ್ಲ ಮತ್ತು ಬೆಣ್ಣೆಯನ್ನು ವಿವಿಧ ಪಾತ್ರೆಗಳಲ್ಲಿ ಸ್ವಲ್ಪ ಸ್ವಲ್ಪ ಸುರಿದನು. ಇದನ್ನು ಕಂಡ ಸೇವಕನು ಬಿಲಾಲಪದಾಕನಿಗೆ ವಿಷಯ ತಿಳಿಸಿದನು. ಇದನ್ನು ಅರ್ಥಮಾಡಿಕೊಳ್ಳಲಾಗದ ಆ ಶ್ರೀಮಂತನು ಆ ದಾನಿಯ ಬಗ್ಗೆ ಸಂಶಯ ಪಟ್ಟು ಇಂದು ಆ ದಾನಿಯು ನಾನು ನೀಡಿರುವುದು ಅತಿ ಅಲ್ಪವೆಂದು ಅಪಮಾನಗೊಳಿಸಿದರೆ ನಾನು ಈ ಚೂರಿಯಿಂದ ಆತನ ಹತ್ಯೆಗೈಯ್ಯುವೆನು ಎಂದು ನಿರ್ಧರಿಸಿದ್ದನು.
ಆದರೆ ಆ ದಾನಿಯು ಭಗವಾನರೊಂದಿಗೆ ಹೀಗೆ ಹೇಳಿದನು: ಭಗವಾನ್ ಈ ದಾನವು ಎಲ್ಲರಿಂದಲೂ ಕೂಡಿ ಸಮಪರ್ಿಸಲ್ಪಟ್ಟಿದೆ. ಅದು ಅಲ್ಪವಾಗಿರಲಿ ಅಥವಾ ಅಧಿಕವಾಗಿರಲಿ, ಪ್ರತಿಯೊಂದು ಶ್ರದ್ಧೆಯಿಂದ ದಾನ ಮಾಡಿದ್ದಾರೆ. ಹೀಗಾಗಿ ಎಲ್ಲರಿಗೂ ಸಮಾನದ ಪುಣ್ಯ ಸಿಗುವಂತಾಗಲಿ ಎಂದು ಕೋರಿಕೊಂಡನು. ಭಗವಾನರು ಒಪ್ಪಿಗೆ ಸೂಚಿಸಿದರು. ಆ ದಾನಿಯಿಂದ ಈ ಮಾತುಗಳನ್ನು ಕೇಳಿದ ನಂತರ ಆ ಶ್ರೀಮಂತನಿಗೆ ಪಶ್ಚಾತ್ತಾಪ ಉಂಟಾಯಿತು. ಆತನು ದಾನಿಯಿಂದ ಹೀಗೆ ಕ್ಷಮೆಯಾಚಿಸಿದನು: ಮಿತ್ರನೇ, ನಿನ್ನ ಬಗ್ಗೆ ಕೆಟ್ಟದಾಗಿ ಚಿಂತಿಸಿ ತಪ್ಪು ಮಾಡಿದ್ದೇನೆ, ಪಾಪ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು.
ದಾನಿಗೆ ವಿಷಯ ಅರ್ಥವಾಗದೆ ಗಲಿಬಿಲಿಗೊಂಡನು. ವಿಷಯ ತಿಳಿದನಂತರ ಆತನು ಕ್ಷಮಿಸಿದನು. ಆಗ ಭಗವಾನರು ಆ ಶ್ರೀಮಂತನಿಗೆ ಹೀಗೆ ಹೇಳಿದರು: ಓ ಶಿಷ್ಯನೇ, ಪುಣ್ಯವನ್ನು ಅಥವಾ ದಾನವನ್ನು ಎಂದಿಗೂ ಅಲ್ಪವೆಂದೆಣಿಸಬೇಡ, ಅದು ಎಷ್ಟೇ ಚಿಕ್ಕದಿರಲಿ, ನಿರಂತರವಿದ್ದರೆ ಅದು ದೊಡ್ಡದಾಗುವುದು ಎಂದು ಸಮಾಧಾನಿಸಿದರು. ನಂತರ ಈ ಗಾಥೆ ನುಡಿದರು:
ಪುಣ್ಯವನು ಕುರಿತು ಹಗುರವಾಗಿ ಎಣಿಸಬೇಡಿ
ನನಗೆ ಸಿಗುವುದಿಲ್ಲ ಎಂದು ಯೋಚಿಸಬೇಡಿ.
ಹೇಗೆ ಮಡಿಕೆಯು ಹನಿ ಹನಿ ನೀರಿನಿಂದ ತುಂಬುವುದೋ
ಹಾಗೆಯೇ ಜ್ಞಾನಿಯು ಸಹಾ ಸ್ವಲ್ಪ ಸ್ವಲ್ಪವಾಗಿಯೇ
ಪುಣ್ಯವನ್ನು ಸಂಗ್ರಹಿಸುತ್ತಾನೆ.

3.16 ದಾನಿಯಲ್ಲಿ ಇರಬೇಕಾದ ಮೂರು ಗುಣಗಳು

1. ದಾನಕ್ಕೆ ಮುಂಚೆ ಆನಂದ
2. ದಾನ ನೀಡುವಾಗ ಸಂತೃಪ್ತಿ ಮತ್ತು ಪರಿಶುದ್ಧತೆ
3. ದಾನದ ನಂತರ (ಪಶ್ಚಾತ್ತಾಪವಿಲ್ಲದ) ಆನಂದ

3.17 ಅತಿಥಿಯಲ್ಲಿ ಇರಬೇಕಾದ ಮೂರು ಗುಣಗಳು

1. ದ್ವೇಷರಹಿತನಾಗಿರಬೇಕು
2. ರಾಗರಹಿತನಾಗಿರಬೇಕು
3. ಮೋಹರಹಿತನಾಗಿರಬೇಕು
ಈ ರೀತಿ ದಾನಿಯ ಮೂರು ಗುಣಗಳು ಮತ್ತು ಅತಿಥಿಯ ಮೂರು ಗುಣಗಳು ಸೇರಿದಾಗ ಆ ದಾನಕ್ಕೆ ಮಹತ್ಫಲ ಸಿಗುವುದು.

3.18 ಯಾವುದನ್ನು ದಾನ ಮಾಡಬಾರದು


  • ಶಸ್ತ್ರಾಸ್ತ್ರಗಳನ್ನು ದಾನ ಮಾಡಬಾರದು.
  • ವಿಷವನ್ನು ಮತ್ತು ವಿಷ ವಸ್ತುಗಳನ್ನು ದಾನ ಮಾಡಬಾರದು.
  • ಮಾದಕ ವಸ್ತುಗಳನ್ನು, ಮದ್ಯಪಾನವನ್ನು ದಾನ ಮಾಡಬಾರದು.
  • ಜೂಜಿನ ಸಲಕರಣೆಗಳನ್ನು ದಾನ ಮಾಡಬಾರದು.
  • ಮೋಜನ್ನು ನೀಡಿ, ನಿರ್ಲಕ್ಷತೆ ಹೆಚ್ಚಿಸುವಂತಹುಗಳನ್ನು ದಾನ ನೀಡಬಾರದು.
  • ಹಾನಿಯುಂಟುಮಾಡುವ ಯಾವುದನ್ನೂ ದಾನ ಮಾಡಬಾರದು.
  • ವ್ಯಭಿಚಾರ ದಾನವನ್ನು ಮಾಡಬಾರದು.
  • ದುಶ್ಚಟಗಳಿಗೆ ದಾರಿ ನೀಡುವಂತಹವುಗಳನ್ನು ದಾನ ಮಾಡಬಾರದು.
  • ನಿಷ್ಟ್ರಯೋಜಕವಾದುದನ್ನು ದಾನ ಮಾಡಬಾರದು.
  • ಮೂಢನಂಬಿಕೆಯನ್ನು ದಾನ ಮಾಡಬಾರದು.

3.19 ಯಾರಿಗೆ ದಾನ ನೀಡಬಾರದು


  • ಹಾನಿ ಮಾಡುವವರಿಗೆ, ದುಷ್ಚಟಗಳಿಗೆ ಬಲಿಯಾದವರಿಗೆ ದಾನ ಮಾಡಬಾರದು.
  • ದಾನದಿಂದ ಹಾನಿಯಾಗುವವರಿಗೆ, ದಾನದಿಂದ ಪರರಿಗೆ ಹಾನಿಯಾಗುವುದಿದ್ದರೆ ಅಂತಹವರಿಗೆ ದಾನ ಮಾಡಬಾರದು.
  • ದಾನದಿಂದ ಯಾಚಕನಿಗೆ ಲಾಭವಾಗಬೇಕು ಹಾಗು ಪರರಿಗೆ ಅದರಿಂದ ಹಾನಿಯಾಗದಿದ್ದರೆ ಮಾತ್ರ ದಾನ ಮಾಡಬೇಕು.

3.20 ಸತ್ಪುರುಷರು ಯಾಚಿಸಲಾರರು
ಬಹುಕಾಲದ ಹಿಂದೆ ಬೋಧಿಸತ್ವರು ಪಂಚಾಲ ರಾಜ್ಯದಲ್ಲಿ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ್ದರು. ಅವರು ಸಕಲ ವಿದ್ಯೆಗಳನ್ನು ಕಲಿತು ನಂತರ ತಪಸ್ವಿ ಜೀವನವನ್ನು ಇಷ್ಟಪಟ್ಟು ಹಿಮಾಲಯದಲ್ಲಿ ಧ್ಯಾನಿಯಾಗಿ ಜೀವಿಸುತ್ತಿದ್ದರು.
ರಾಜನಿಗೆ ಅವರ ಚಾರಿತ್ರ್ಯ ಇಷ್ಟವಾಗಿ ಅವರೊಂದಿಗೆ ಸಖ್ಯ ಬೆಳೆಸಿದನು. ನಿತ್ಯವೂ ಅರಮನೆಯಲ್ಲಿ ಭೋಜನ ವ್ಯವಸ್ಥೆಯನ್ನು ಮಾಡಿಸಿದನು. ಮಳೆಗಾಲದಲ್ಲಿ ಆಶ್ರಯವೂ ನೀಡಿದನು. ಮಳೆಗಾಲ ಕಳೆದಮೇಲೆ ಹಿಮಾಲಯಕ್ಕೆ ಹೋಗಲು ನಿಶ್ಚಯಿಸಿದರು. ಆಗ ಅವರಿಗೆ ರಾಜನ ಮಿತ್ರತ್ವ ಇಷ್ಟವಾಗಿ ತಮಗೆ ಪಾದರಕ್ಷೆ ಮತ್ತು ಎಲೆಯ ಛತ್ರಿಯನ್ನು ಕೇಳಲು ನಿರ್ಧರಿಸಿದರು. ಆದರೂ ರಾಜನ ಮುಂದೆ ಅವರು ಕೇಳದಾದರು. ಅದಕ್ಕೆ ಅವರಲ್ಲಿದ್ದ ಪಾಪಲಜ್ಜೆಯೇ ಕಾರಣವಾಗಿತ್ತು. ಆದರೂ ಕೆಲವೊಮ್ಮೆ ಅವಶ್ಯಕತೆ ಕಂಡುಬಂದು ರಾಜ ಏಕಾಂತದಲ್ಲಿ ಮಾತನಾಡುವುದಿದೆ ಎಂದುಬಿಟ್ಟರು. ಏಕಾಂತದಲ್ಲಿಯೂ ಅದನ್ನು ಯಾಚಿಸದೆ ರಾಜನನ್ನು ಮರೆಸುಬಿಡುತ್ತಿದ್ದರು. ಹೀಗೆ 12 ವರ್ಷಗಳಾದರೂ ಅವರು ಯಾಚಿಸದೆ ಹೋದರು. ಆಗ ರಾಜನಿಗೆ ಹೀಗೆ ಸಂದೇಹವಾಯಿತು. ಈ ಆರ್ಯರು ನನ್ನೊಂದಿಗೆ ಏನನ್ನೋ ಕೇಳಲು ಬಯಸುತ್ತಿದ್ದಾರೆ ಆದರೆ ಯಾಚಿಸಲಾರದೆ ಹೋಗುತ್ತಿದ್ದಾರೆ. ಇಂದು ಇವರು ರಾಜ್ಯವನ್ನೇ ಕೇಳಿದರೂ ಕೊಟ್ಟುಬಿಡುವೆನು ಎಂದು ನಿಶ್ಚಯಿಸಿದನು. ಹಾಗೂ ಹೀಗೆ ಅವರೊಂದಿಗೆ ಮಾತನಾಡಿದನು. ಆರ್ಯರೇ, ನೀವು ಏನನ್ನೋ ಯಾಚಿಸಲು 12 ವರ್ಷದಿಂದ ಪ್ರಯತ್ನಿಸುತ್ತಿದ್ದೀರಿ, ಆದರೆ ಯಾಚಿಸಲಾರದೆ ಹೋಗಿದ್ದೀರಿ. ಬಯಕೆ ಏನೇ ಇರಲಿ, ನಿರ್ಭಯದಿಂದ ಕೇಳಿಕೊಳ್ಳಿ. ಎಂದನು.
ಆಗ ಬೋಧಿಸತ್ವರು ಹೀಗೆಂದರು: ಓ ಬ್ರಹ್ಮದತ್ತ ಮಹಾರಾಜ, ಯಾಚಿಸುವವನು ಅಪ್ರಿಯನಾಗುತ್ತಾನೆ, ಕೇಳಿದ ಮೇಲೆ ನೀಡದಿರುವವನು ಅಪ್ರಿಯವಾಗಿ ಕಾಣುತ್ತಾನೆ. ಆದ್ದರಿಂದ ನನ್ನೊಂದಿಗೆ ಬೇಸರ ಉಂಟಾಗದಿರಲಿ ಎಂದು ನಾನು ಯಾಚಿಸುವುದಿಲ್ಲ. ಯಾಚಕನಿಗೆ ಎರಡು ಗತಿಗಳಿರುತ್ತದೆ. ಫಲಪ್ರಾಪ್ತಿ ಅಥವಾ ಅಪ್ರಾಪ್ತಿ. ಬೇಡುವುದನ್ನು ರೋಧನ ಎನ್ನುತ್ತಾನೆ ಮತ್ತು ಕೇಳಿದಮೇಲೆ ನೀಡಲಾರದೆ ನುಡಿಯುವುದನ್ನು ಪ್ರತಿರೋಧನ ಎನ್ನುತ್ತಾರೆ. ಈ ರೋಧನ, ಪ್ರತಿರೋಧನ ಪರರು ನೋಡದಿರಲಿ ಎಂದು ನಾನು ಏಕಾಂತ ಬಯಸುತ್ತಿದ್ದೆನು ಎಂದರು.
ಆಗ ರಾಜನು ಉಚಿತ ಸಮಯದಲ್ಲಿ ದಾನ ಕೇಳುವವನು ಪರರಿಗೂ ಪುಣ್ಯ ನೀಡಿದವನಾಗುತ್ತಾನೆ, ಪ್ರಜ್ಞಾವಂತರು ಯಾಚಿಸುವವನನ್ನು ದ್ವೇಷಿಸಲಾರರು. ಹೇಳಿ ತಾಪಸಿಯೇ, ನೀವು ನನಗೆ ಪ್ರಿಯ, ಬಯಸಿದ್ದೆಲ್ಲವನ್ನೂ ಕೇಳಿ.
ಬೋಧಿಸತ್ವರು ಪ್ರಜ್ಞಾವಂತರು ಯಾಚಿಸುವುದಿಲ್ಲ, ಅವರು ಭಿಕ್ಷೆಗೂ ಮೌನವಾಗಿ ನಿಲ್ಲುತ್ತಾರೆ. ಇದೇ ಆರ್ಯರ ಯಾಚನೆಯಾಗಿದೆ.
ಓ ಋಷಿಯೆ, ನೀವು ದಯವಿಟ್ಟು ನಿರ್ಭಯರಾಗಿ ಕೇಳಿ, ನಿಮಗಾಗಿ ಇಡೀ ರಾಜ್ಯದ ಸಮೇತ ಎಲ್ಲವನ್ನೂ ನೀಡಲು ಸಿದ್ಧನಿದ್ದೇನೆ.
ಹಾಗಾದರೆ ಮಹಾರಾಜ! ನನಗೆ ದಾರಿಯಲ್ಲಿ ನಡೆಯಲು ಅನುಕೂಲವಾಗಿರಲು ಒಂದು ಜೊತೆ ಚಪ್ಪಲಿ ಮತ್ತು ಎಲೆಗಳಿಂದಾದ ಒಂದು ಕೊಡೆ ಬೇಕು.
ಭಂತೆ ಇದನ್ನೇ ನೀವು 12 ವರ್ಷಗಳಿಂದಲೂ ಕೇಳದೆ ಸಂಕೋಚಪಡುತ್ತಿದ್ದುದು.
ಹೌದು ಮಹಾರಾಜ.
ಆಗ ರಾಜನು ಅವರ ಚಾರಿತ್ರ್ಯದಿಂದ ಆಶ್ಚರ್ಯಚಕಿತನಾಗಿ ಅವುಗಳ ಜೊತೆಗೆ ಸಾವಿರ ಹಸುಗಳನ್ನು ನೀಡಲು ಮುಂದಾದನು. ಆದರೆ ಬೋಧಿಸತ್ವರು ಚಪ್ಪಲಿ ಮತ್ತು ಛತ್ರಿಯನ್ನು ಮಾತ್ರ ಪಡೆದರು. ಉಳಿದುದನ್ನು ಸ್ವೀಕರಿಸಲು ನಿರಾಕರಿಸಿದರು. ನಂತರ ಬೋಧಿಸತ್ವರು ಹಿಮಾಲಯಕ್ಕೆ ಹಿಂತಿರುಗಿ ಅಲ್ಲಿ ಧ್ಯಾನ ಅಭಿಜ್ಞಾಗಳನ್ನು ಗಳಿಸಿದರು.
3.21 ಅತಿಯಾಚನೆ ಕೂಡದು
ಬಹುಕಾಲದ ಹಿಂದೆ ಬೋಧಿಸತ್ವರು ವಾರಾಣಸಿಯಲ್ಲಿ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದರು. ಕೆಲವರ್ಷಗಳ ನಂತರ ಅವರಿಗೆ ಒಬ್ಬ ತಮ್ಮನು ಹುಟ್ಟಿದನು. ಈ ಅಣ್ಣ-ತಮ್ಮಂದಿರು ಹಿರಿಯರಾದ ಮೇಲೆ ತಂದೆ-ತಾಯಿಯರು ಮೃತರಾಗಿದ್ದರಿಂದಲೇ ಅವರು ಪಬ್ಬಜ್ಜ ಪಡೆದು ಗಂಗಾ ತೀರದಲ್ಲಿ ಒಂದೊಂದು ದಡದಲ್ಲಿ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದರು.
ಅವರ ತಮ್ಮ ವಾಸಿಸುತ್ತಿದ್ದ ದಡದಲ್ಲಿ ಒಮ್ಮೆ ಮಣಿಕಂಠನೆಂಬ ದಿವ್ಯ ನಾಗರಾಜನು ಬ್ರಹ್ಮಚಾರಿಯ ವೇಷದಲ್ಲಿ ಬಂದು ಅವರ ತಮ್ಮನ (ಕಿರಿಯ ತಪಸ್ವಿ) ಬಳಿಗೆ ಬಂದು ಸ್ನೇಹ ಬೆಳೆಸಿದನು. ಕಾಲನಂತರ ಸ್ನೇಹವು ಗಾಢವಾದ ಮೇಲೆ ನಾಗರಾಜ ತನ್ನ ನಿಜಸ್ಥಿತಿ ತಿಳಿಸಿ ನಾಗರೂಪವನ್ನು ತೋರಿಸಿದನು. ಅಷ್ಟೇ ಅಲ್ಲ, ಸಖ್ಯಭಾವದಿಂದ ಕಿರಿಯ ತಪಸ್ವಿಯ ದೇಹಕ್ಕೆ ಸುತ್ತಿಕೊಂಡು ವಿರಮಿಸುತ್ತಿದ್ದನು. ಕಿರಿಯ ತಪಸ್ವಿಗೆ ಮೊದಲಿನಿಂದಲೂ ನಾಗಗಳು ಕಂಡರೆ ಭಯವಿತ್ತು. ಈಗ ಮಣಿಕಂಠನು ನಾಗರೂಪದಲ್ಲಿ ಬಂದು ಈ ರೀತಿ ದೇಹ ಸುತ್ತುವುದರಿಂದ ಆತನು ಭಯದಿಂದ ಕೂಡಿಕೊಂಡನು. ಇದು ಪುನರಾವರ್ತನೆಯಾಗಿ ಅತನು ದುರ್ಬಲನಾಗಿ, ಒಣಗಿಕೊಂಡು, ರೋಗಿಯಾದನು.
ಆ ಸಮಯದಲ್ಲಿ ಅಣ್ಣನು ತಮ್ಮನ ಈ ಸ್ಥಿತಿಯನ್ನು ಕಂಡು ವಿಚಾರಿಸಿದಾಗ ವಿಷಯವೆಲ್ಲ ತಿಳಿದನು. ನಂತರ ತಮ್ಮನಿಗೆ ಹೀಗೆ ಕೇಳಿದನು: ನಾಗರಾಜನು ಆಭರಣಗಳನ್ನು ಧರಿಸಿ ಬರುವನೇ?
ಹೌದು, ಮಣಿರತ್ನ ಧರಿಸಿ ಬರುವನು.
ಈಗ ಹಿರಿಯ ತಪಸ್ವಿಗಳಾದ ಬೋಧಿಸತ್ವರು ಪ್ರಜ್ಞಾಶೀಲತೆಯಿಂದ ಯೋಚಿಸಿ ಈಗ ಪಾರಾಗಲು ಉಪಾಯವೊಂದನ್ನು ತಿಳಿಸಿದರು. ಮಾರನೆಯದಿನ ನಾಗರಾಜ ಎಂದಿನಂತೆ ಪರ್ಣಕುಟೀರಕ್ಕೆ ಬಂದು ನಿಲ್ಲುತ್ತಲೇ ಕಿರಿಯ ತಪಸ್ವಿಯು ನಾಗರಾಜನಲ್ಲಿ ಹೀಗೆ ಯಾಚಿಸಿದನು: ಓ ನಾಗರಾಜ, ನಿನ್ನ ಮಣಿರತ್ನ ನನಗೆ ಚೆನ್ನಾಗಿ ಹಿಡಿಸಿದೆ, ನನಗೆ ಅದನ್ನು ನೀಡು. ಇದನ್ನು ಆಲಿಸುತ್ತಲೇ ನಾಗರಾಜ ಅಲ್ಲಿರಲಾರದೆ ಕೆಲಸವಿದೆ ಎಂದು ಹೇಳಿ ಹೊರಟುಹೋದನು. ಮಾರನೆಯ ದಿನ ಆಶ್ರಮವನ್ನು ನಾಗರಾಜ ಇನ್ನೇನು ಪ್ರವೇಶಿಸಬೇಕು, ತಕ್ಷಣ ಕಿರಿಯ ತಪಸ್ವಿಯು ನೆನ್ನೆ ನೀವು ಆಭರಣ ನೀಡಲಿಲ್ಲ, ಇಂದಾದರೂ ಮಣಿರತ್ನವನ್ನು ನೀಡಿ ಎಂದು ಯಾಚಿಸಿದನು. ಆಗಲೂ ನಾಗರಾಜ, ಒಳಬರಲಾರದೆ ಹಾಗೆಯೇ ಹೊರಟುಹೋದನು. ಮಾರನೆಯ ದಿನ ನಾಗರಾಜನು ನೀರಿನಿಂದ ಹೊರಬರುತ್ತಿದ್ದಂತೆ ಕಿರಿಯ ತಪಸ್ವಿಯು ಆ ಮಣಿರತ್ನ ಎಂದು ಕೇಳುತ್ತಿದ್ದಂತೆ ನೀರಿನಲ್ಲಿ ನಾಗರಾಜ ಮುಳುಗುತ್ತ ಹೀಗೆ ಹೇಳಿದನು:
ಇನ್ನೊಬ್ಬರಿಗೆ ಪ್ರಿಯವಾಗಿರುವ ವಸ್ತುವನ್ನು ಎಂದಿಗೂ ಯಾಚಿಸಬಾರದು, ಅತಿಯಾಗಿ ಯಾಚಿಸುವುದರಿಂದ ಅವರು ಪ್ರಿಯರಾಗಲಾರರು. ಈ ಮಣಿಯು ನನ್ನ ಸರ್ವಸ್ವ, ನೀನು ಅತಿ ಯಾಚಕನಾಗಿರುವೆ, ಇದನ್ನು ನಾನು ನಿನಗೆ ನೀಡಲಾರೆ, ನಿನ್ನ ಬಳಿಗೂ ಬರಲಾರೆ, ಇದನ್ನೇ ಯಾಚಿಸುತ್ತ ತೊಂದರೆ ನೀಡಿ, ಹೆದರಿಸುತ್ತಿದ್ದೀಯೆ, ನಿನ್ನಲ್ಲಿಗೆ ಬರಲಾರೆ ಎಂದು ಹೇಳಿ ನಾಗರಾಜನು ಮುಳುಗಿಹೋದನು.
ಆದರೆ ನಾಗರಾಜನ ಸ್ನೇಹಹೀನತೆಯಿಂದ ಕಿರಿಯ ತಪಸ್ವಿ ಚಿಂತಿತನಾದನು. ಆದರೆ ಹಿರಿಯ ತಪಸ್ವಿಯ ಬೋಧನೆಯಿಂದ ಅವನು ಸರಿಹೋದನು. ಮುಂದೆ ಇಬ್ಬರೂ ಸಹಾ ಧ್ಯಾನ ಲಾಭ ಪಡೆದರು.

3.22 ದಾನದಲ್ಲಿ ಬೇಧಭಾವ ಇರಬಾರದು

ಮಾನವನಲ್ಲಿ ಎಲ್ಲಿಯವರೆಗೆ ಮಿಥ್ಯಾದೃಷ್ಟಿ ಮತ್ತು ಸ್ವಾರ್ಥಗಳು ಇರುತ್ತವೋ ಅಲ್ಲಿಯವರೆಗೆ ಆತನಲ್ಲಿ ಬೇಧಭಾವವೂ ಇರುತ್ತವೆ. ಆಗ ಆತನು ವ್ಯಕ್ತಿಯಿಂದ ವ್ಯಕ್ತಿಗೆ ಭೇದಭಾವ ಮಾಡುತ್ತಾನೆ, ಪಕ್ಷಪಾತ ಮಾಡುತ್ತಾನೆ. ಆತನಿಗೆ ಇವರು ನನ್ನವರು ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಪ್ರಿಯಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡುತ್ತಾನೆ. ಹಾಗೆಯೇ ಮಿಥ್ಯಾದೃಷ್ಟಿಯಿಂದ ಇವರು ಪರರು ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಅಪ್ರಿಯ ಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡಲಾರ. ಬದಲಾಗಿ ದ್ವೇಷಿಸುತ್ತಾನೆ, ಹಾಗು ತೊಂದರೆಯನ್ನುಂಟು ಮಾಡಬಹುದು.
ಆದ್ದರಿಂದಾಗಿ ದಾನಿಯು ಮೈತ್ರಿಯ ಭಾವ ತಾಳಬೇಕು. ಆತನಿಂದ ಎಲ್ಲರಿಗೂ ಪ್ರಯೋಜನವಾಗಬೇಕು. ಆತನು ಮಳೆಯಂತೆ ಸರ್ವರಿಗೂ ಲಾಭ ನೀಡಬೇಕು, ಪೃಥ್ವಿಯಂತೆ ಎಲ್ಲರಿಗೂ ಆಧಾರವಾಗಬೇಕು, ನೀರಿನಂತೆ ಸರ್ವರಿಗೂ ಚೈತನ್ಯ ನೀಡಬೇಕು, ಗಾಳಿಯಂತೆ ಸರ್ವರಿಗೂ ಜೀವ ನೀಡಬೇಕು. ಅಗ್ನಿಯಂತೆ ಸರ್ವರಿಗೂ ಪ್ರಯೋಜನಕಾರಿಯಾಗಬೇಕು.

  • ಜನಾಂಗೀಯ ಬೇಧವಿರಕೂಡದು. 
  • ಉಚ್ಚ-ನೀಚ ಬೇಧಭಾವವಿರಕೂಡದು.
  • ಈ ದೇಶ - ಆ ದೇಶವೆಂದು ಬೇಧಭಾವವಿರಕೂಡದು.
  • ರಾಜ್ಯಗಳ ನಡುವೆ ಬೇಧಭಾವವಿರಕೂಡದು.
  • ಭಾಷೆಗಳ ಆಧಾರಿತ ಬೇಧಭಾವವಿರಕೂಡದು.
  • ಧರ್ಮಗಳ ಆಧಾರಿತ ಬೇಧಭಾವವಿರಕೂಡದು.
  • ಜಾತಿಗಳ ಆಧಾರಿತ ಬೇಧಭಾವವಿರಕೂಡದು.
  • ಬಡವ-ಶ್ರೀಮಂತ ಎಂಬ ಯಾವುದೇ ಬೇಧಭಾವವಿರಕೂಡದು.
  • ಪಾಪಿ-ಪುಣ್ಯಶಾಲಿಯೆಂಬ ಬೇಧಭಾವವಿರಕೂಡದು.
  • ಒಟ್ಟಾರೆ ಯಾವುದೇ ಬೇಧಭಾವವಿರಕೂಡದು.

No comments:

Post a Comment