Wednesday 14 August 2019

The Significance Of August Month Full Moon Day ಆಗಷ್ಟ್ ತಿಂಗಳ ಹುಣ್ಣಿಮೆಯ ವಿಶೇಷ

ಆಗಷ್ಟ್ ತಿಂಗಳ ಹುಣ್ಣಿಮೆಯ ವಿಶೇಷ

ಇಂದು ಪ್ರಮುಖವಾಗಿ 2 ವಿಶೇಷಗಳು ಘಟಿಸಿವೆ
1. ಪೂಜ್ಯ ಆನಂದರವರು ಅರಹಂತರಾಗಿದ್ದು.
2. ಮೊದಲ ಧಮ್ಮ ಸಂಗೀತಿ (ಮೊದಲ ಬೌದ್ಧ ಸಂಗಾಯನ) ನಡೆದುದ್ದು.

ಬುದ್ಧನ ಮಹಾಪರಿನಿಬ್ಬಾಣದ ನಂತರ ಬುದ್ಧ ಶಾಸನದ ಥೇರರು ಮತ್ತು ಆಚಾರ್ಯರು ಸೇರಿ ಧಮ್ಮ ಸಂಗೀತಿ (ಮೊದಲ ಬೌದ್ಧ ಸಂಗಾಯನ)ಯನ್ನು ಆಯೋಜಿಸುವ ಸಂದರ್ಭ ಒದಗಿಬಂತು. ಇದರ ಉದ್ದೇಶವೆಂದರೆ ಬುದ್ಧನು ಉಪದೇಶಿಸಿದ ಧಮ್ಮ ಮತ್ತು ವಿನಯವನ್ನು ನೆನಪಿನಿಂದ ಕಂಠಸ್ಥ ಮಾಡಿ ಹೇಳುವುದು. ಹೀಗೆ ಮಾಡುವುದರಿಂದ ಜ್ಞಾನ, ಸಾಧನೆ ಮತ್ತು ಸಾಕ್ಷಾತ್ಕಾರವೆಂಬ ಮೂರು ಮೂಲಗಳಿಂದ ಪರಿಯತ್ತಿ, ಪಟಿಪತ್ತಿ ಮತ್ತು ಪಟಿವೇಧ ಸಮ್ಮಾಸಂಬುದ್ಧರ ಮಾತುಗಳನ್ನು ಮೂಲ ರೂಪದಲ್ಲೇ ಸಂರಕ್ಷಿಸಿಕೊಂಡು ಬರುವುದು.
ಮೇಲೆ ಹೇಳಿದ ಸಂದರ್ಭ ಯಾವುದೆಂದರೆ ಸುಬದ್ಧ ಎನ್ನುವ ನಾಪಿತ ಕುಲದವನು ಮುಪ್ಪಿನಲ್ಲಿ ಭಿಕ್ಖುವಾದ ಮೇಲೆ ಒಮ್ಮೆ ಭಿಕ್ಖುಗಳ ಗುಂಪಿಗೆ ಅಗೌರವ ತರುವ ರೀತಿಯಲ್ಲಿಯೇ ಹೀಗೆ ಹೇಳುತ್ತಾನೆ: ಇನ್ನು ಸಾಕು, ಸೋದರರೆ, ಶೋಕಿಸುವುದು ಸಾಕು, ಮಹಾಸಮಣ ತೊಲಗಿ ಹೋದ. ಮಹಾಸಮಣ ಇಲ್ಲಿ ಬುದ್ಧರು.
ನಾವು ಅವರಿಂದ ಸೃಷ್ಟಿಸಲ್ಪಟ್ಟ ವಿನಯದಿಂದ (ಶಿಸ್ತಿನ ನಿಯಮಗಳು) ಬಹಳ ತೊಂದರೆಗೊಳಗಾದೆವು. ಇದನ್ನು ಮಾಡಬೇಕು, ಇದನ್ನು ಮಾಡಬಾರದು; ಆದರೆ ಈಗ ನಾವು ಏನು ಮಾಡಬೇಕೆನ್ನಿಸುತ್ತದೊ ಅದನ್ನು ನಾವು ಮಾಡಬಹುದು ಮತ್ತು ಏನು ಮಾಡಬಾರದೆಂದು ನಮಗನಿಸುತ್ತದೋ ಅದನ್ನು ಮಾಡದೇ ಇರಬಹುದು.
ವೃದ್ಧನಾದ ಸುಭದ್ಧನು ಆರಾಮವಾದ ಬದುಕನ್ನು ಮಾಡಬೇಕೆಂದು ಒಬ್ಬ ಕಳ್ಳ ಸಂನ್ಯಾಸಿಯಾದನು. ಸಂಘದಲ್ಲಿ ಸೇರುವುದು ಅವನಿಗೆ ಸುಲಭವಿತ್ತು. ಕಾರಣ ಅಲ್ಲಿ ಜಾತಿ ಅಥವಾ ಯಾವುದೇ ನಿರ್ಬಂಧಗಳಿರಲಿಲ್ಲ. ಸಂಘದಲ್ಲಿ ರಾಜರೂ ಸದಸ್ಯರಾಗಿದ್ದರು ಸುಭದ್ಧನೂ ಇರುವಂತೆ. ಸುಭದ್ಧನ ಈ ಮಾತನ್ನು ಸಂಘದ ಅತ್ಯಂತ ಹಿರಿಯ ನಾಯಕನಾದ ಮಹಾಕಸ್ಸಪನು ಕೇಳಿಸಿಕೊಂಡನು. ಸುಭದ್ಧನ ಈ ರೀತಿಯ ಮನೋ ಧರ್ಮದಿಂದ ಬುದ್ಧ ಶಾಸನಕ್ಕೆ ತೊಂದರೆಯಾಗುತ್ತದೆಂದು ಯೋಚಿಸಿದನು.

ಆ ಸಮಯದಲ್ಲಿ ಅಲ್ಲಿ ಕೇವಲ 499 ಅರಹಂತರಿದ್ದರು. 500ಕ್ಕೆ ಒಬ್ಬರು ಅರಹಂತರು ಬಾಕಿ ಇದ್ದರು. ಆಗ ಮಹಾಕಸ್ಸಪರವರು ಆನಂದರವರನ್ನು ಶೀಘ್ರದಲ್ಲಿಯೇ ಅರಹಂತರಾಗುವಂತೆ ಕೇಳಿಕೊಂಡರು. ಅದರಂತೆಯೇ ಆನಂದರವರು ಅಂದೇ ಅರಹಂತರಾದರು. ಹೀಗೆ ಮಹಾಧಮ್ಮ ಭಂಡಾರಿಕ ಆನಂದರ ಸಹಿತ 500 ಅರಹಂತರ ಉಪಸ್ಥಿತಿಯಲ್ಲಿ ಈ  ಧಮ್ಮ ಸಂಗೀತಿ (ಮೊದಲ ಬೌದ್ಧ ಸಂಗಾಯನ) ನಡೆಯಿತು.

ಆದ್ದರಿಂದಲೇ ಐದು ನೂರು ಮಹಾ ವಿದ್ವಾಂಸರಾದ ಅರ್ಹಂತರನ್ನು ಎಲ್ಲ ಧಮ್ಮ ಆಚಾರ್ಯರನ್ನು ಸೇರಿಸಿ ಸಭೆ ಕರೆದನು. ಈ ಎಲ್ಲಾ ಥೇರರು ಒಂದೆಡೆ ರಾಜಗಹದ ಸತ್ತಪಣ್ಣಿ ಗುಹೆಯಲ್ಲಿ ಮೊಟ್ಟಮೊದಲ ಬೌದ್ಧ ಸಂಗಾಯನದಲ್ಲಿ ಸೇರಿದರು. ಈ ಐತಿಹಾಸಿಕ ಸಭೆಗೆ ರಾಜ ಅಜಾತಸತ್ತುವು ಎಲ್ಲ ವ್ಯವಸ್ಥೆಯನ್ನು ಮಾಡುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದನು. ಈ ಸಂಗಾಯನವು ಈಗ ನಾವು ಯಾವ ತಿಪಿಟಕವನ್ನು ನೋಡುತ್ತಿದ್ದೆವೊ ಅದನ್ನು ಏಳು ತಿಂಗಳಕಾಲ ಪಠಿಸಿತು.
ಇಬ್ಬರು ಮಹಾಪಠಕರು ಪೂಜ್ಯ ಅರ್ಹಂತ ಉಪಾಲಿಯು ವಿನಯದ ಮೇಲೆ ಪಾಂಡಿತ, ಹೊಂದಿದವರು ವಿನಯವನ್ನು ಪಠಿಸಿದರು. ಇನ್ನೊಬ್ಬರು ಪೂಜ್ಯ ಆನಂದರು ಧಮ್ಮಭಂದಗಾರಿಕಾ ಆಗಿದ್ದರು. ಅವರಿಗೆ ಮೂರು ಪಿಟಕಗಳ ಮೇಲೂ ಪಾಂಡಿತ್ಯವಿತ್ತು. ಹೀಗೆ ಥೇರವಾದ ಮಹಾ ಸಂಘದ ದೆಸೆಯಿಂದಾಗಿಯೇ ಬುದ್ಧನ ಉಪದೇಶಗಳು ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದು ಇಲ್ಲಿಯವರೆಗೂ ಇವೆ.
ಮಹಾ ಥೇರರಾದ ಮಹಾಕಸ್ಸಪರು ಈ ಕೆಳಗಿನಂತೆ ವಿಧಾನವನ್ನು ಅನುಸರಿಸಿದರು. ಮೊದಲು ಅವರು ಸಂಘವನ್ನು ಸೇರಿಸಿ ಬುದ್ಧವಚನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರಲು ಮತ್ತು ಮುಂದಿನ ಜನಾಂಗದ ಅನುಕೂಲಕ್ಕಾಗಿ ಪಠಿಸುವವರ ಪರಿಷತ್ತನ್ನು ಅಂದರೆ ಧಮ್ಮ ಸಂಗೀತಿಯನ್ನು ಕೂಡಲೇ ಸೇರಿಸಬೇಕೆಂದರು. ಸಂಘವು ಅದಕ್ಕೆ ಒಪ್ಪಿಗೆ ನೀಡಿತು. ರಾಜಗಹವನ್ನು ಪರಿಷತ್ತಿನ ಸ್ಥಳವನ್ನಾಗಿ ಆರಿಸಿಕೊಂಡು ಪೂಜ್ಯ ಮಹಾ ಕಸ್ಸಪರಿಗೆ ಪಠಿಸುವವರನ್ನು ಆಯ್ಕೆ ಮಾಡಿಕೊಳ್ಳಲು ಅಧಿಕಾರ ನೀಡಿತು. ಅವರು ಐದುನೂರು ವಿದ್ವಾಂಸರಾದ ಅರ್ಹಂತ ಶಿಷ್ಯರನ್ನು ಆಯ್ಕೆ ಮಾಡಿದರು. ಅವರೆಲ್ಲರೂ ಪಟಿಸಂಭಿಧ ಜ್ಞಾನವನ್ನು ಹೊಂದಿ, ಇಡೀ ಬುದ್ಧವಚನವನ್ನು ತಮ್ಮ ದಿವ್ಯ ಶಕ್ತಿಯಿಂದ ನೆನಪಿನಲ್ಲಿಟ್ಟುಕೊಂಡು ಪಠಿಸುವವರಾಗಿದ್ದರು.
ಪೂಜ್ಯ ಮಹಾ ಕಸ್ಸಪರು ಮಗಧ ದೇಶದ ದೊರೆ ಅಜಾತಸತ್ತುವಿಗೆ ಸಂಘದ ತೀಮರ್ಾನವನ್ನು ತಿಳಿಸಿದರು. ಮಗಧದ ಪ್ರಭಾವಶಾಲಿ ರಾಜನಾದ ಅಜಾತಸತ್ತುವು ಬುದ್ಧನ ವಿನಮ್ರ ಅನುಯಾಯಿ. ಈ ಹಿಂದೆ ರಾಜಗಹವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ವಿನಂತಿಸಿದ್ದ. ಆದ್ದರಿಂದ ಸತ್ತಪಣ್ಣಿ ಗುಹೆಯ ಹೊರಗಡೆ ಒಂದು ವಿಶಾಲ ವೇದಿಕೆಯನ್ನು ಎಲ್ಲ ವಾಸ್ತು ಲಕ್ಷಣಗಳೊಂದಿಗೆ ನಿಮರ್ಿಸಿ ಪರಿಷತ್ತಿಗಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಿದ. ಹೀಗೆ ಬುದ್ಧನ ಮಹಾ ಪರಿನಿಬ್ಬಾಣದ ಮೂರು ತಿಂಗಳ ತರುವಾಯ ಐದುನೂರು ವಿದ್ವಾಂಸರಾದ ಅರ್ಹಂತ ಥೇರರು, ಜ್ಞಾನೋದಯ ಹೊಂದಿದ ಬುದ್ಧನ ಶಿಷ್ಯರು ರಾಜಗಹದಲ್ಲಿ ಸೇರಿ ಮಹಾ ಗುರುವಿನ ಎಲ್ಲ ಉಪದೇಶಗಳನ್ನು ಏಳು ತಿಂಗಳ ಕಾಲ ಪಠಿಸಿದರು. ಪೂಜ್ಯ ಮಹಾಕಸ್ಸಪರು ಈ ಅಭೂತಪೂರ್ವವಾದ ಮೊದಲು ಮಹಾ ಸಂಗಾಯನದ ಅಧ್ಯಕ್ಷರಾಗಿದ್ದರು.
ಭಗವಾನ್ ಬುದ್ಧರೇ ಪೂಜ್ಯ ಉಪಾಲಿ ಥೇರರನ್ನು ವಿನಯದಲ್ಲಿ ಮಹಾ ಪಂಡಿತನೆಂದು ಗುರುತಿಸಿದ್ದರು.  ಇಂತಹ ಉಪಾಲಿಯು ವಿನಯದ ಪ್ರತಿಯೊಂದು ಭಾಗವನ್ನು ಅದರ ಚಾರಿತ್ರಿಕ ಹಿನ್ನೆಲೆಯನ್ನು ನೀಡುತ್ತಾ ಇಡೀ ವಿನಯಪಿಟಕವನ್ನು ಪಠಿಸಿದರು. ಬುದ್ಧರು ಪೂಜ್ಯ ಆನಂದ ಥೇರರನ್ನು ಧಮ್ಮಭಂಡಾರಿಕಾ ಎಂದು ಕರೆದಿದ್ದರು. ಇಂತಹ ಆನಂದರು ಇಡೀ ಸುತ್ತ ಮತ್ತು ಮಾತಿಕಾ (ಅಭಿಧಮ್ಮ ಪಿಟಕ)ಗಳನ್ನು ಪಠಿಸಿದರು. ಹೀಗೆ ಬುದ್ದೋಪದೇಶಗಳು ಮಹಾ ಗುರುವಿನ ಕಾಲದಲ್ಲೇ ವ್ಯವಸ್ಥೆಗೆ ಒಳಪಟ್ಟು ಅಲ್ಲಿಂದ ಇಲ್ಲಿಯವರೆಗೆ ಅಧಿಕೃತವಾಗಿ ಮೊದಲ ಸಂಗಾಯನದ ಮೊದಲ ಅಗ್ರಗಣ್ಯ ವಿದ್ವಾಂಸ, ಪ್ರಸಿದ್ಧ ಅರ್ಹಂತರಿಂದ ನಮಗೆ ಬಂದಿವೆ.